ADVERTISEMENT

ಸೊಳ್ಳೆ ಲಾರ್ವ ನಾಶಕ್ಕೆ ಮೀನು

ಡೆಂಗೆ ತಡೆಗೆ ಬಿಬಿಎಂಪಿ ವಿನೂತನ ಕ್ರಮ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:51 IST
Last Updated 11 ಜೂನ್ 2013, 19:51 IST

ಬೆಂಗಳೂರು: ಡೆಂಗೆ ಜ್ವರ ಹರಡದಂತೆ ನೋಡಿಕೊಳ್ಳಲು ಬಿಬಿಎಂಪಿ ಮಹದೇವಪುರ ವಲಯದ ಅಧಿಕಾರಿ ಗಳು ವಿನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸೊಳ್ಳೆ ಲಾರ್ವ ನಾಶಪಡಿಸಲು ಗ್ಯಾಂಬೂಸಿಯಾ ಮೀನು ಗಳನ್ನು ಮನೆ- ಮನೆಗಳ ತೊಟ್ಟಿಗಳಲ್ಲಿ ತಂದು ಬಿಡುತ್ತಿದ್ದಾರೆ.

`ಡೆಂಗೆಗೆ ಕಾರಣವಾಗುವ ಸೊಳ್ಳೆಗಳು ಸಂಗ್ರಹಿಸಿದ ನೀರಿನಲ್ಲೇ ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳ ಉತ್ಪಾದನೆಯನ್ನು ತಡೆಗಟ್ಟಿದರೆ ರೋಗ ಹರಡದಂತೆ ನೋಡಿಕೊಳ್ಳಲು ಸಾಧ್ಯ. ಹೀಗಾಗಿ ನೀರು ಸಂಗ್ರಹಣೆ ತೊಟ್ಟಿಗಳಲ್ಲಿ ಮೀನುಗಳನ್ನು ಬಿಡಲಾಗುತ್ತಿದೆ' ಎಂದು ಬಿಬಿಎಂಪಿ ಮಹದೇವಪುರ ವಲಯದ ಆರೋಗ್ಯಾಧಿಕಾರಿ ಕಲ್ಪನಾ `ಪ್ರಜಾವಾಣಿ'ಗೆ ತಿಳಿಸಿದರು.

`ಮಹದೇವಪುರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತೊಟ್ಟಿ, ಟಾಕಿ ಮೊದಲಾದವುಗಳಲ್ಲಿ ಜನ ನೀರಿನ ಸಂಗ್ರಹ ಮಾಡುತ್ತಾರೆ. ಸಂಗ್ರಹಿಸಿದ ನೀರನ್ನು ಬಹುಕಾಲ ಇಟ್ಟು ಬಳಸುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅವುಗಳಲ್ಲಿ ಮೀನು ಬಿಡುವುದರಿಂದ ಲಾರ್ವಗಳು ಉತ್ಪತ್ತಿಯಾದ ತಕ್ಷಣವೇ ಮೀನುಗಳು ಅವುಗಳನ್ನು ತಿಂದು ಬಿಡುತ್ತವೆ. ಆಗ ಸೊಳ್ಳೆ ಹಾವಳಿ ಇರುವುದಿಲ್ಲ' ಎಂದು ಅವರು ವಿವರಿಸಿದರು.

ಮಹದೇವಪುರ ವಲಯದ ಆರೋಗ್ಯ ವಿಷಯವಾಗಿ ಸೂಕ್ಷ್ಮ ಎನಿಸಿದ ಪ್ರದೇಶಗಳಲ್ಲಿ ಈಗಾಗಲೇ 30 ಸಾವಿರ ಮೀನುಗಳನ್ನು ಹಂಚಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೀನುಗಳನ್ನು ಶೇಖರಣೆ ಮಾಡಲಾಗಿತ್ತು. ಡೆಂಗೆ ವಿರುದ್ಧದ ಹೋರಾಟದಲ್ಲಿ ಮೀನು ಹಂಚಿಕೆ ಒಂದು ಭಾಗವಷ್ಟೇ. ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಫಾಗಿಂಗ್ ಮಾಡುವುದು, ಜನರಲ್ಲಿ ಜಾಗೃತಿ ಉಂಟು ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಹದೇವಪುರ ವಲಯದಲ್ಲಿ ಇದುವರೆಗೆ 11 ಡೆಂಗೆ ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಸೂಚಿಸಿರುವ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ, ಡೆಂಗೆ ತಡೆಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇತ್ತೀಚೆಗೆ ನಡೆದ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಅವರು ಆರೋಗ್ಯ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.