ಬೆಂಗಳೂರು: ಸ್ಥಿರಾಸ್ತಿಯ ಬಿ-ಖಾತೆ ನೀಡಲು 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬಿಬಿಎಂಪಿಯ ಯಲಹಂಕ ಕರ ವಸೂಲಿದಾರ ವಿಜೇಂದ್ರ ಮತ್ತು ವೀರೇಶ್ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೋಗಿಲು ಗ್ರಾಮದಲ್ಲಿ ಆಸ್ತಿ ಹೊಂದಿರುವ ಚಲಪತಿ ಎಂಬುವರು ಬಿ-ಖಾತೆ ನೀಡುವಂತೆ ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು.
ಖಾತೆ ನೀಡಲು ರೂ 20 ಸಾವಿರ ಲಂಚ ನೀಡುವಂತೆ ವಿಜೇಂದ್ರ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳವಾರ ಚಲಪತಿ ಹಣ ನೀಡಲು ಹೋದಾಗ ವೀರೇಶ್ ಬಳಿ ಕೊಡುವಂತೆ ವಿಜೇಂದ್ರ ಸೂಚಿಸಿದ್ದರು. ಅದರಂತೆ ಮಧ್ಯವರ್ತಿ ಲಂಚ ಪಡೆದಿದ್ದರು.
ಈ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಸಣ್ಣತಿಮ್ಮಪ್ಪ ಒಡೆಯರ್ ಇಬ್ಬರು ಆರೋಪಿಗಳನ್ನೂ ಬಂಧಿಸಿದರು. ಎಸ್ಪಿ ಪಿ.ಕೆ.ಶಿವಶಂಕರ್ ಮತ್ತು ಡಿವೈಎಸ್ಪಿ ಎಚ್.ಎಸ್.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.