ADVERTISEMENT

‘ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:54 IST
Last Updated 4 ಮಾರ್ಚ್ 2018, 19:54 IST
ಅತ್ತಿಗುಪ್ಪೆ ವಾರ್ಡಿನ ಪಾಲಿಕೆ ಸದಸ್ಯ ಡಾ.ರಾಜು, ಒಕ್ಕೂಟದ ಗೌರವ ಅಧ್ಯಕ್ಷ ಚಿಕ್ಕರೇವಣ್ಣ, ಸಮುದಾಯದ ಯುವ ಮುಖಂಡ ನಿಖಿತ್ ರಾಜ್ ಮೌರ್ಯ ಹಾಗೂ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಅತ್ತಿಗುಪ್ಪೆ ವಾರ್ಡಿನ ಪಾಲಿಕೆ ಸದಸ್ಯ ಡಾ.ರಾಜು, ಒಕ್ಕೂಟದ ಗೌರವ ಅಧ್ಯಕ್ಷ ಚಿಕ್ಕರೇವಣ್ಣ, ಸಮುದಾಯದ ಯುವ ಮುಖಂಡ ನಿಖಿತ್ ರಾಜ್ ಮೌರ್ಯ ಹಾಗೂ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಲಾಗುವುದು  ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಒಕ್ಕೂಟವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮುದಾಯದ ನಾಯಕರನ್ನು ಬೆಳೆಸಲಿಲ್ಲ ಎಂಬ ಆರೋಪ ನಮ್ಮ ಮೇಲಿದೆ. ಅದನ್ನು ಒಪ್ಪಿಕೊಳ್ಳುವೆ. ಆದರೆ, ಯಾರಾದರೂ ಮುಂದೆ ಬಂದರೆ ತಾನೇ ನಾಯಕರನ್ನು ಬೆಳೆಸಲು ಸಾಧ್ಯ. ಮನೆ ಬಿಟ್ಟು ರಾಜ್ಯ ಸುತ್ತಾಡಿ ಸಮುದಾಯ ಅಭಿವೃದ್ಧಿಗೆ ಶ್ರಮಿಸಲು ಮುಂದೆ ಬರುವವರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ನಮ್ಮ ಸಮುದಾಯದಲ್ಲಿ ಸಾಕಷ್ಟು ಸಂಘಗಳು ಹುಟ್ಟಿಕೊಂಡಿವೆ. ಕೆಲ ಸಂಘ–ಸಂಸ್ಥೆಗಳು ಸಕ್ರಿಯವಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿವೆ. ಬಹುತೇಕವು ನಿಷ್ಕ್ರಿಯವಾಗಿದ್ದು, ಅವುಗಳನ್ನು ಕೇವಲ ವಿಸಿಟಿಂಗ್ ಕಾರ್ಡ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘1,000 ಗಾಯಕರಿಂದ ಕನಕದಾಸರ ಕೀರ್ತನೆ’
‘ಕನಕದಾಸರ ಕೀರ್ತನೆಗಳನ್ನು 1,000 ಗಾಯಕರಿಂದ ಹಾಡಿಸಬೇಕು ಎಂಬ ಮಹದಾಸೆಯಿದೆ. ಅದು ಆದಷ್ಟು ಬೇಗ ಈಡೇರಲಿದೆ’ ಎಂದು ರೇವಣ್ಣ ತಿಳಿಸಿದರು.

‘ಕುರುಬ ಸಮುದಾಯ ಹಾಗೂ ಸಂಸ್ಕೃತಿ ಬಗ್ಗೆ 17 ಸಂಪುಟಗಳ ಕೃತಿಯನ್ನು ಹೊರತರುತ್ತಿದ್ದೇವೆ. ಮೂರು ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

**

10 ವರ್ಷ ರಾಜಕೀಯ ಅಜ್ಞಾತವಾಸ ಅನುಭವಿಸಿದ್ದೆ. ಆಗ ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕುರುಬ ಸಮುದಾಯ. ಇದಕ್ಕೆ ನಾನೆಂದಿಗೂ ಋಣಿ
- ಎಚ್.ಎಂ.ರೇವಣ್ಣ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.