ADVERTISEMENT

ಸ್ವಾತಂತ್ರ್ಯದ ಜತೆಗೆ ಸ್ವವಿಮರ್ಶೆ ಅಗತ್ಯ: ಸಿ.ಎನ್‌.ರಾಮಚಂದ್ರನ್‌

​ಪ್ರಜಾವಾಣಿ ವಾರ್ತೆ
Published 31 ಮೇ 2014, 19:55 IST
Last Updated 31 ಮೇ 2014, 19:55 IST
ವಿಕಾಸ ಪ್ರಕಾಶನವು ನಗರದ ಇಂಡಿ­ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ  ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಹಿರಿಯ ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಅವರು ‘ಬೊಗಸೆಯಲ್ಲಿ ಹೊಳೆನೀರು’ ಪುಸ್ತಕ ಬಿಡುಗಡೆ ಮಾಡಿ, ಲೇಖಕಿ ಡಾ.­ಬಿ.ಎನ್‌.­ಸುಮಿತ್ರಾಬಾಯಿ ಅವರಿಗೆ ಹಸ್ತಾಂತರಿಸಿದರು. ಲೇಖಕಿ ಉಮಾ­ರಾವ್‌, ಹಿರಿಯ ಪತ್ರಕರ್ತ ಎಚ್‌.­ಎನ್‌.­­ಆನಂದ, ವಿಮರ್ಶಕಿ ಡಾ.­ಎಂ.ಎಸ್‌.­ಆಶಾದೇವಿ, ಭಾಷಾವಿಜ್ಞಾನಿ ಫಾದರ್‌ ಪ್ರಶಾಂತ ಮಾಡ್ತ, ಲೇಖಕ ಪ್ರೊ.ಆರ್‌.ರಾಜಾರಾಮ್‌, ‘ಪ್ರಜಾವಾಣಿ’ ಸಹಾಯಕ ಸಂಪಾದಕಿ  ಆರ್‌.ಪೂರ್ಣಿಮಾ ಇದ್ದಾರೆ	–ಪ್ರಜಾವಾಣಿ  ಚಿತ್ರ
ವಿಕಾಸ ಪ್ರಕಾಶನವು ನಗರದ ಇಂಡಿ­ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಅವರು ‘ಬೊಗಸೆಯಲ್ಲಿ ಹೊಳೆನೀರು’ ಪುಸ್ತಕ ಬಿಡುಗಡೆ ಮಾಡಿ, ಲೇಖಕಿ ಡಾ.­ಬಿ.ಎನ್‌.­ಸುಮಿತ್ರಾಬಾಯಿ ಅವರಿಗೆ ಹಸ್ತಾಂತರಿಸಿದರು. ಲೇಖಕಿ ಉಮಾ­ರಾವ್‌, ಹಿರಿಯ ಪತ್ರಕರ್ತ ಎಚ್‌.­ಎನ್‌.­­ಆನಂದ, ವಿಮರ್ಶಕಿ ಡಾ.­ಎಂ.ಎಸ್‌.­ಆಶಾದೇವಿ, ಭಾಷಾವಿಜ್ಞಾನಿ ಫಾದರ್‌ ಪ್ರಶಾಂತ ಮಾಡ್ತ, ಲೇಖಕ ಪ್ರೊ.ಆರ್‌.ರಾಜಾರಾಮ್‌, ‘ಪ್ರಜಾವಾಣಿ’ ಸಹಾಯಕ ಸಂಪಾದಕಿ ಆರ್‌.ಪೂರ್ಣಿಮಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾನತೆಯ ನೆಲೆಯಲ್ಲಿ ಚಿಂತಿಸುವ ಬರಹಗಾರರು ಸ್ವಾತಂತ್ರ್ಯದ ಜತೆಗೆ ಸ್ವವಿಮರ್ಶೆಯ ನಿಲುವು ಹೊಂದುವುದು ಅಗತ್ಯ’ ಎಂದು  ಹಿರಿಯ ವಿಮರ್ಶಕ ಡಾ.ಸಿ.ಎನ್‌.­ರಾಮಚಂದ್ರನ್‌ ಅಭಿಪ್ರಾಯಪಟ್ಟರು. ವಿಕಾಸ ಪ್ರಕಾಶನವು ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ  ಶನಿವಾರ ಆಯೋಜಿಸಿದ್ದ ವಿವಿಧ ಪುಸ್ತಕಗಳ ಬಿಡು­ಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪುರುಷ ಜಗತ್ತಿನಲ್ಲಿ ತನ್ನ ಅಸ್ಮಿತೆಗಾಗಿ  ಹೋರಾಡುವ ಸ್ತ್ರೀವಾದ ನೆಲೆಯ  ಬರಹಗಾರರು ಸ್ವಾತಂತ್ರ್ಯದ ಜತೆಯಲ್ಲಿಯೇ ಸ್ವವಿಮರ್ಶೆಗೆ ಒಳ­ಪಡಬೇಕು ಎಂಬುದು ಸುಮಿತ್ರಾಬಾಯಿ ಅವರ ನಿಲುವು. ಇದು ಎಲ್ಲ ಬರಹಗಾರರಿಗೂ ಅನ್ವಯಿ­ಸುತ್ತದೆ’ ಎಂದು ಪ್ರತಿಪಾದಿಸಿದರು.
‘ಸ್ತ್ರೀವಾದದ ಮೂಲನೆಲೆಗಳು ಸುಮಿತ್ರಾ­ಬಾಯಿ ಅವರ ಬೊಗಸೆಯಲ್ಲಿವೆ.

ಸ್ತ್ರೀ ಪುರುಷರ ನಡುವಿನ ಬಿಕ್ಕಟ್ಟು ಎಲ್ಲೆಡೆ ಇದೆ. ಹಾಗಾಗಿ ಸ್ತ್ರೀವಾದ ವ್ಯಾಪಕವಾಗಿದ್ದರೂ, ಅದನ್ನು ಸ್ಥಳೀಯ ದೃಷ್ಟಿಕೋನದಿಂದ ತರ್ಕಿಸುವ ಅಗತ್ಯವಿದೆ’ ಎಂದು ಹೇಳಿದರು.  ಹಿರಿಯ ಪತ್ರಕರ್ತ ಎಚ್‌.ಎನ್‌.ಆನಂದ, ‘ಹಾಸ್ಯ ಸಾಹಿತ್ಯ ಸತ್ತಿಲ್ಲ. ಆದರೆ, ಅದರ ಗುಣಮಟ್ಟ ಕುಸಿ­ಯುತ್ತಿದೆ ಎಂಬುದಕ್ಕೆ ಈಗಿನ ಹಾಸ್ಯಲೇಖನಗಳೇ ಸಾಕ್ಷಿ’ ಎಂದು ಹೇಳಿದರು.

‘ಸದಾಶಿವ ಅವರ ‘ವಾರೆನೋಟ’ ಅಂಕಣ ಬರಹದಲ್ಲಿ ನಕ್ಕುನಗಿಸುವ ಹಾಸ್ಯ ದೊರೆಯದೇ ಇರಬಹುದು. ಆದರೆ, ಚಿಂತನೆಗೆ ಹಚ್ಚುವ ತಿಳಿ­ಹಾಸ್ಯವು ಒಳಗಣ್ಣನ್ನು  ತೆರೆಯುವಂತೆ ಮಾಡುತ್ತದೆ’ ಎಂದು ಶ್ಲಾಘಿಸಿದರು. ಭಾಷಾವಿಜ್ಞಾನಿ ಫಾದರ್‌ ಪ್ರಶಾಂತ ಮಾಡ್ತ, ‘ನನ್ನ ವಿದ್ಯಾರ್ಥಿಯಾಗಿದ್ದ ರಾಜಾರಾಮ್‌ ಅವರ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿ­ಯಾ­ಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಜಾಗತೀಕರಣದ ಭರಾಟೆಯಲ್ಲಿ ಇಂಗ್ಲಿಷ್‌ ಭಾಷೆಯ ಬಗ್ಗೆ ಇನ್ನಿಲ್ಲದ ವ್ಯಾಮೋಹ ಬೆಳೆ­ಯುತ್ತಿದೆ. ಇಂಗ್ಲಿಷ್‌ ಅನ್ನು ಕಲಿಯುವುದು ಅಗತ್ಯ. ಆದರೆ, ಹೆಚ್ಚು ಕಲಿತರೆ ಮಾತೃಭಾಷೆಯ ನೆಲೆ­ಯೊಳಗೆ ಹುಟ್ಟುವ ಸೃಜನಶೀಲತೆ ನಶಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
‘ಇಂಗ್ಲಿಷ್‌ ಜತೆಗೆ ಅದರ ಒಟ್ಟು ಲೋಕದೃಷ್ಟಿ­ಯನ್ನು ಕೂಡ ಕಲಿಯುವುದರಿಂದ ಸ್ಥಳೀಯ ಭಾಷೆ , ಸಂಸ್ಕೃತಿ ಮತ್ತು ಇಂಗ್ಲಿಷ್‌ ನಡುವೆ ತಿಕ್ಕಾಟಗಳು ಶುರುವಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ’ ಎಂದು ಹೇಳಿದರು.

ವಿಮರ್ಶಕಿ ಡಾ.ಎಂ.ಎಸ್‌. ಆಶಾದೇವಿ, ‘ಬದು­ಕಿನ ಎಲ್ಲಾ ಹಂತದಲ್ಲೂ ಹೆಣ್ಣಿಗೆ ಸಮಾನತೆ ದೊರೆ­ಯಬೇಕು ಎಂಬುದು ಸಾಹಿತ್ಯ ಸಂವೇದನೆಯ ಭಾಗವಾಗಬೇಕು’ ಎಂದು ತಿಳಿಸಿದರು. ‘ಉಮಾ ರಾವ್‌ ಅವರ  ಕಾದಂಬರಿಯಲ್ಲಿ ಕಥಾನಾಯಕಿ ಒಳಬಂಡಾಯದಿಂದ ಸ್ವಪ್ರಜ್ಞೆಯೆ­ಡೆಗೆ ಚಲಿಸುತ್ತಾಳೆ. ಭೂತಕಾಲದ ಜಗಳ, ಭವಿಷ್ಯದ ನಿರೀಕ್ಷೆಗಳನ್ನು ಮೀರಿ ವರ್ತಮಾನಕ್ಕಾಗಿ ಹಂಬಲಿ­ಸುತ್ತಾಳೆ. ಈ  ಕೃತಿ ಉತ್ತಮ ಸಿನಿಮಾ ಆಗುವ ಲಕ್ಷಣವನ್ನು ಹೊಂದಿದೆ’ ಎಂದು ಹೇಳಿದರು.

ಕೃತಿಗಳ ಬೆಲೆ: ಡಾ.ಬಿ.ಎನ್‌.ಸುಮಿತ್ರಾಬಾಯಿ ಅವರ ‘ಬೊಗ­ಸೆಯಲ್ಲಿ ಹೊಳೆನೀರು–ವಿಮರ್ಶಾ ಬರಹಗಳು’–₨ 90, ದಿವಂಗತ ಜಿ.ಎಸ್‌.ಸದಾಶಿವ ಅವರ ‘ಸದಾ ವಾರೆನೋಟ– ಅಂಕಣ ಬರಹ’– ₨140, ಪ್ರೊ. ಆರ್‌.ರಾಜಾರಾಮ್‌ ‘ಸ್ಮಾರ್ಟ್‌ ಇಂಗ್ಲಿಷ್‌–ಭಾಷಾ ಕಲಿಕೆಯ ಕೈಪಿಡಿ’– ₨160,  ಉಮಾ ರಾವ್‌ ‘ವನಜಮ್ಮನ ಸೀಟು’ ಕಾದಂಬರಿ– ₨50.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.