ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯೊಡತಿ ಮತ್ತು ಕೆಲಸದಾಕೆಯನ್ನು ಬೆದರಿಸಿ ಕಟ್ಟಿ ಹಾಕಿ ಅರ್ಧ ಕೆ.ಜಿ. ಚಿನ್ನದ ಆಭರಣ ದರೋಡೆ ಮಾಡಿರುವ ಘಟನೆ ಚೋಳೂರುಪಾಳ್ಯದ ವಿದ್ಯಾರಣ್ಯಪುರದಲ್ಲಿ ಶುಕ್ರವಾರ ನಡೆದಿದೆ.
ನಾಗರತ್ನ ಮತ್ತು ಜಯಮ್ಮ ದರೋಡೆಗೊಳಗಾದವರು. ನಾಗರತ್ನ ಅವರ ಪತಿ ನಿತ್ಯಾನಂದ ಅವರು ಮೆಜೆಸ್ಟಿಕ್ನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಳಿಗ್ಗೆ ಅವರು ಅಂಗಡಿಗೆ ಹೋಗಿದ್ದರು. ಜಯಮ್ಮ ಅವರು ಎಂದಿನಂತೆ ಮನೆ ಕೆಲಸಕ್ಕಾಗಿ ಬಂದಿದ್ದರು.
ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಇಬ್ಬರನ್ನೂ ಮಾರಕಾಸ್ತ್ರಗಳಿಂದ ಬೆದರಿಸಿದ್ದಾರೆ. ಕೊಠಡಿಗೆ ಎಳೆದೊಯ್ದ ಅವರು ಇಬ್ಬರಿಗೂ ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕೈಕಾಲು ಕಟ್ಟಿ ಹಾಕಿದ್ದಾರೆ.
ಅಲ್ಮೇರಾದಲ್ಲಿ ಮತ್ತು ಮೈಮೇಲೆ ಇದ್ದ ಸುಮಾರು ಅರ್ಧ ಕೆ.ಜಿ. ಚಿನ್ನದ ಆಭರಣ ಮತ್ತು ಎಂಬತ್ತು ಸಾವಿರ ರೂಪಾಯಿ ನಗದು ದೋಚಿದ ಅವರು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಹೋದ ನಂತರ ಅರ್ಧ ಗಂಟೆಯಾದ ಮೇಲೆ ಕಟ್ಟು ಬಿಡಿಸಿಕೊಂಡ ಅವರು ಪಕ್ಕದ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ.
ಇಬ್ಬರೂ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆರೆದಿಟ್ಟಿದ್ದರಿಂದ ದರೋಡೆಕೋರರು ಸುಲಭವಾಗಿ ಒಳಗೆ ನುಗ್ಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.