ಬೆಂಗಳೂರು: ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧದ ಕೊರತೆಯಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಇದರಿಂದ, ಲಸಿಕೆಯನ್ನು ಆಮದು ಮಾಡಿಕೊಳ್ಳುವಂತೆ ಕೆಲವು ಆಸ್ಪತ್ರೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಬೇಸಿಗೆಯಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ, ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಎದುರಾಗಿದೆ. ಪೀಣ್ಯ ಬಳಿಯ ಆಂದ್ರಹಳ್ಳಿಯಲ್ಲಿರುವ ವಿದ್ಯಮಾನ್ಯನಗರದ ಮರಿಯಂ ದಹಾ (48) ಅವರಿಗೆ ಮಂಗಳವಾರ ಉದ್ಯಾನದಲ್ಲಿ ಮಂಡಲದ ಹಾವು ಕಚ್ಚಿದೆ. ಕೂಡಲೇ ಅವರನ್ನು ನಾಗರಬಾವಿಯ ಯುನಿಟಿ ಲೈಫ್ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಔಷಧ ಇಲ್ಲದಿರುವುದರಿಂದ ಅವರನ್ನು ಪೆನೇಶಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅಲ್ಲಿಯೂ ಔಷಧ ಲಭ್ಯವಿಲ್ಲದ್ದರಿಂದ ಅವರು ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಈ ಆಸ್ಪತ್ರೆಗಳಿಗೆ ತಿಂಗಳಿಗೆ ಎರಡಾದರೂ ಹಾವು ಕಡಿತದ ಪ್ರಕರಣಗಳು ಬರುತ್ತವೆ. ಆದರೆ, ಕಳೆದ ಆರು ತಿಂಗಳಿನಿಂದ ಈ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧ ಲಭ್ಯವಿಲ್ಲ.
ಹಾವು ಕಡಿತದ ಔಷಧದ ಕೊರತೆಯ ಕುರಿತು ಬಂದಿರುವ ದೂರುಗಳನ್ನು ಆಧರಿಸಿ, ‘ಪ್ರಜಾವಾಣಿ’ ವರದಿಗಾರರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಔಷಧ ಮಳಿಗೆ ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ವಿಚಾರಿಸಿದಾಗ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧ ಇಲ್ಲದಿರುವ ವಿಷಯ ತಿಳಿಯಿತು.
‘ತುರ್ತು ಸಂದರ್ಭದಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಔಷಧಿಯನ್ನು ತರಿಸಿಕೊಳ್ಳುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರೊಬ್ಬರು ಹೇಳಿದರು. ಆದರೆ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಪಿ.ಕೆ.ದೇವ್ದಾಸ್, ‘ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಔಷಧಿ ಲಭ್ಯವಿದೆ’ ಎಂದು ಸಮರ್ಥಿಸಿಕೊಂಡರು.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸುವ ಕರ್ನಾಟಕ ರಾಜ್ಯ ಔಷಧ ಸಂಗ್ರಹ ಮತ್ತು ಪೂರೈಕೆ ಸಂಸ್ಥೆಯ (ಕೆಎಸ್ಡಿಎಲ್ಡಬ್ಲ್ಯುಎಸ್) ಅಧಿಕಾರಿಗಳು ಹಾವು ಕಡಿತದ ಔಷಧ ಇಲ್ಲದಿರುವುದನ್ನು ಒಪ್ಪಿಕೊಳ್ಳುತ್ತಾರೆ.
‘ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧದ ಕೊರತೆಯಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಔಷಧ ಆಮದು ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಔಷಧ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಕೆಎಸ್ಡಿಎಲ್ಡಬ್ಲ್ಯುಎಸ್ ಮುಖ್ಯ ಮೇಲ್ವಿಚಾರಕ ಡಾ.ಶ್ರೀಧರ್ಮೂರ್ತಿ.
ಹಾವಿನ ಕಡಿತದ ಔಷಧ ತಯಾರಿಕೆಗೆ ಹಾವುಗಳ ವಿಷವನ್ನೇ ಬಳಸುವುದರಿಂದ ಹಾವುಗಳ ಸಂಕುಲಕ್ಕೆ ಇದು ಮಾರಕವಾಗಿದೆ. ಹೀಗಾಗಿ ಈ ಔಷಧ ತಯಾರಿಕೆಯನ್ನೇ ನಿಲ್ಲಿಸಬೇಕು ಎಂದು ಪ್ರಾಣಿ ಹಕ್ಕುಗಳ ರಕ್ಷಣಾ ಸಂಸ್ಥೆಯು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಪುಣೆಯ ಸೆರಮ್ ಇನ್ಸ್ಟಿಟ್ಯೂಟ್, ಹೈದರಾಬಾದ್ನ ವಿನ್ಸ್ ಬಯೋಟೆಕ್, ಮುಂಬೈನ ಹಾಫ್ಕಿನ್ಸ್ ಇನ್ಸ್ಟಿಟ್ಯೂಟ್ ಕಂಪೆನಿಗಳು ಈ ಔಷಧ ತಯಾರಿಕೆಯಲ್ಲಿ ತೊಡಗಿವೆ.
‘ನಾವಿರುವ ಸ್ಥಳದಲ್ಲಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ. ಹಾವು ಕಚ್ಚಿದಾಗ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ಸಾಧ್ಯವಿಲ್ಲ. ಹಾವು ಕಡಿತಕ್ಕೆ ಆದಷ್ಟು ಬೇಗ ಚಿಕಿತ್ಸೆ ದೊರೆಯಬೇಕು. ಹತ್ತಿರದ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಔಷಧ ಲಭ್ಯವಿದೆಯೇ ಎಂಬ ಬಗ್ಗೆ ಇತ್ತೀಚೆಗೆ ಕೆಲ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಔಷಧ ಲಭ್ಯವಿದಿರುವುದು ಗೊತ್ತಾಯಿತು’ ಎಂದು ಉತ್ತರಹಳ್ಳಿ ನಿವಾಸಿ ನೀತು ಶರ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.