ADVERTISEMENT

ಹೊಸ ತಂತ್ರಜ್ಞಾನ ಅಳವಡಿಕೆ ಅಗತ್ಯ

ಸುಗಂಧ ದ್ರವ್ಯ ತೈಲ ಉತ್ಪಾದನೆ, ಬಳಕೆ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:35 IST
Last Updated 18 ಡಿಸೆಂಬರ್ 2012, 19:35 IST
ನಗರದಲ್ಲಿ ಮಂಗಳವಾರ ನಡೆದ `ದಕ್ಷಿಣ ಭಾರತದಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ತೈಲಗಳ ಉತ್ಪಾದನೆ ಮತ್ತು ಬಳಕೆ' ಕುರಿತ ಕಾರ್ಯಾಗಾರದಲ್ಲಿ ಸೋನಾರೊಮ ಗ್ರೂಪ್ ಬೆಂಗಳೂರು ಕಂಪೆನಿಯ ಮುಖ್ಯಸ್ಥ ಟಿ.ಎಸ್.ಗುಲಾಟಿ, ಭಾರತೀಯ ಸುಗಂಧ ದ್ರವ್ಯ ತೈಲಗಳ ಒಕ್ಕೂಟದ ಅಧ್ಯಕ್ಷ ಡಾ.ಆರ್.ಎಲ್. ಗುಪ್ತ,  ಅನಿಲ್ ಕಾತ್ಯಾಲ್,  ಎಂ.ಎನ್. ವಿದ್ಯಾಶಂಕರ್ ಚಿತ್ರದಲ್ಲಿದ್ದಾರೆ
ನಗರದಲ್ಲಿ ಮಂಗಳವಾರ ನಡೆದ `ದಕ್ಷಿಣ ಭಾರತದಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ತೈಲಗಳ ಉತ್ಪಾದನೆ ಮತ್ತು ಬಳಕೆ' ಕುರಿತ ಕಾರ್ಯಾಗಾರದಲ್ಲಿ ಸೋನಾರೊಮ ಗ್ರೂಪ್ ಬೆಂಗಳೂರು ಕಂಪೆನಿಯ ಮುಖ್ಯಸ್ಥ ಟಿ.ಎಸ್.ಗುಲಾಟಿ, ಭಾರತೀಯ ಸುಗಂಧ ದ್ರವ್ಯ ತೈಲಗಳ ಒಕ್ಕೂಟದ ಅಧ್ಯಕ್ಷ ಡಾ.ಆರ್.ಎಲ್. ಗುಪ್ತ, ಅನಿಲ್ ಕಾತ್ಯಾಲ್, ಎಂ.ಎನ್. ವಿದ್ಯಾಶಂಕರ್ ಚಿತ್ರದಲ್ಲಿದ್ದಾರೆ   

ಬೆಂಗಳೂರು: `ಸುಗಂಧ ದ್ರವ್ಯ ತೈಲ ಉತ್ಪಾದನೆ ಕಂಪೆನಿಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಹೇಳಿದರು.

ಭಾರತೀಯ ಸುಗಂಧ ದ್ರವ್ಯ ತೈಲಗಳ ಒಕ್ಕೂಟವು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ `ದಕ್ಷಿಣ ಭಾರತದಲ್ಲಿ ನೈಸರ್ಗಿಕ ಸುಗಂಧ ದ್ರವ್ಯ ತೈಲಗಳ ಉತ್ಪಾದನೆ ಮತ್ತು ಬಳಕೆ' ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ನಮ್ಮ ದೇಶದಲ್ಲಿ ಕೆಲವು ಕೈಗಾರಿಕೆಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಇರುವುದರಿಂದ ನಷ್ಟವನ್ನು ಅನುಭವಿಸುತ್ತಿವೆ. ಹೀಗಾಗಿ, ಅಭಿವೃದ್ಧಿ ಹೊಂದಲು ಇಂದಿನ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ದಿನದಿಂದ ದಿನಕ್ಕೆ ಮಾಹಿತಿ ತಂತ್ರಜ್ಞಾನವು ಬೆಳೆಯುತ್ತಿದೆ. ನಾವು ತಂತ್ರಜ್ಞಾನದ ಜತೆಗೆ ಹೆಜ್ಜೆಯನ್ನು ಹಾಕಬೇಕಾದರೆ, ಹೊಸತನವನ್ನು ಅಳವಡಿಸಿಕೊಳ್ಳಬೇಕು' ಎಂದರು.

`ಸುಗಂಧ ದ್ರವ್ಯ ತೈಲಗಳ ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸತನಕ್ಕೆ ಮುನ್ನುಡಿಯನ್ನು ಬರೆಯಬೇಕು. ಇಂದಿನ ತಂತ್ರಜ್ಞಾನವು ಜೀವನದ ಮೇಲೆ ಪರಿಣಾಮ ಬೀರಿ ನಮ್ಮ ಜೀವನವನ್ನೇ ಬದಲಿಸಿದೆ. ನಾವು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಏಕೆಂದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ, ನಾವು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿಯಲೇಬೇಕು' ಎಂದರು.

`ಮೊದಲಿನ ಕಾಲದಲ್ಲಿ ಇಷ್ಟು ಬೆಳವಣಿಗೆಯಾಗಿರಲಿಲ್ಲ. ಆದರೆ, ಇಂದು ನಾವು ಅರಿಯಲಾಗದಷ್ಟು ಜಗತ್ತು ಮುಂದುವರಿದಿದೆ. ಆದ್ದರಿಂದ, ನಾವು ಹೊಸತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಲೇಬೇಕು' ಎಂದು ನುಡಿದರು.

ಕೇಂದ್ರೀಯ ಔಷಧಿ ಮತ್ತು ಸುಗಂಧ ದ್ರವ್ಯಗಳ ಸಂಶೋಧನ ಕೇಂದ್ರದ ಡಾ.ಇ.ವಿ.ಎಸ್. ಪ್ರಕಾಶ್ ರಾವ್ ಅವರು `ದಕ್ಷಿಣ ಭಾರತದಲ್ಲಿನ ಸುಗಂಧ ದ್ರವ್ಯಗಳ ಉತ್ಪಾದನೆ ಮತ್ತು ಸಾರ್ವಜನಿಕರ ಹಾಗೂ ಖಾಸಗಿಯವರ ಸಹಭಾಗಿತ್ವ' ಕುರಿತು ಮಾತನಾಡಿ, `ಸುಗಂಧ ದ್ರವ್ಯಗಳ ಬೆಳೆಯನ್ನು ಬೆಳೆಯಲು ಭೂಮಿ ಸೀಮಿತವಾಗಿದೆ. ಸುಗಂಧ ದ್ರವ್ಯಗಳನ್ನು ತಯಾರಿಸುವ ಕಂಪೆನಿಗಳು ಸಣ್ಣ ಪ್ರಮಾಣದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ. ಇಂತಹ ಕಂಪೆನಿಗಳಿಗೆ ಪ್ರೋತ್ಸಾಹವನ್ನು ನೀಡಬೇಕಾದ ಅಗತ್ಯವಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.