ADVERTISEMENT

‘ಒತ್ತುವರಿ ತಪ್ಪಿಸಿ, ಮೋರಿ ಸ್ವಚ್ಛಗೊಳಿಸಿ’

ಕುಂದು ಕೊರತೆ ಸಭೆಯಲ್ಲಿ ಕೇಳಿ ಬಂದ ಬೇಡಿಕೆಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 20:00 IST
Last Updated 10 ಜನವರಿ 2014, 20:00 IST

ಬೆಂಗಳೂರು: ಅನಧಿಕೃತ ಹೋಟೆಲ್‌ ಕಟ್ಟಡ ನಿರ್ಮಾಣವನ್ನು ತಪ್ಪಿಸಬೇಕು, ಸರ್ಕಾರಿ ಜಮೀನು ಸಂರಕ್ಷಣೆ ಮಾಡ­ಬೇಕು, ಬೃಹತ್‌ ನೀರುಗಾಲುವೆಯ ಹೂಳು ಮೇಲೆತ್ತಬೇಕು, ಶೌಚಾಲಯ ವ್ಯವಸ್ಥೆ ಸರಿಪಡಿಸಬೇಕು...

ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಅವರು ಶುಕ್ರವಾರ ಪೂರ್ವ ವಲಯದ ಹೆಬ್ಬಾಳ, ಪುಲಕೇಶಿನಗರ ಮತ್ತು ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಕುಂದು ಕೊರತೆಗಳ ಸಭೆಯಲ್ಲಿ ಕೇಳಿಬಂದ ಬೇಡಿಕೆಗಳು ಇವು.

ಪುಲಿಕೇಶಿನಗರದ ನಂಬಿಯಾರ್ ಅಪಾರ್ಟ್‌ಮೆಂಟ್ ರಸ್ತೆಯಲ್ಲಿ ಅನಧಿಕೃತವಾಗಿ ಹೋಟೆಲ್ ನಿರ್ಮಿಸಲು ತಯಾರಿ ನಡೆದಿದೆ. ಇದನ್ನು ತಡೆಯಬೇಕು ಎಂದು ಸ್ಥಳೀಯರೊಬ್ಬರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್‌ ಸ್ಥಳದಲ್ಲಿದ್ದ ಕಾರ್ಯ
ಪಾಲಕ ಎಂಜಿನಿಯರ್‌ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪುಲಿಕೇಶಿನಗರದ ಬೃಹತ್ ನೀರುಗಾಲುವೆಯಲ್ಲಿ ಗಿಡಗಳು ಬೆಳೆದು ನಿಂತಿದ್ದು, ನೀರು ಸರಾಗವಾಗಿ ಹರಿಯದೇ ಮೋರಿಯಲ್ಲಿ ತುಂಬಿ­ಕೊಂಡಿದೆ. ಈ ಕೂಡಲೇ ನೀರು­ಗಾಲುವೆಯನ್ನು ಸ್ವಚ್ಛ­ಗೊಳಿಸಬೇಕು. ಅದರ ಮೇಲೆ ಸ್ಲ್ಯಾಬ್ ನಿರ್ಮಿಸಿ, ಉದ್ಯಾನವನ್ನು ನಿರ್ಮಾಣ  ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಮೇಯರ್‌ ಸತ್ಯ­ನಾರಾಯಣ ಅವರನ್ನು ಕೇಳಿಕೊಂಡರು.

ನಾಗವಾರ ಪ್ರದೇಶದ ನಿವಾಸಿಗಳು ಸದರಿ ಪ್ರದೇಶದಲ್ಲಿ ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದ್ದು, ಇಲ್ಲಿ ಸ್ಕೈವಾಕ್ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಖಾತಾ ವರ್ಗಾವಣೆ ಕೋರಿ, ಸಲ್ಲಿಸಿದ್ದ ಸುಮಾರು ೨೦ ಜನ ಅರ್ಜಿದಾರರಿಗೆ  ಈ ಸಂದರ್ಭದಲ್ಲಿಯೇ ಖಾತಾ ವರ್ಗಾವಣೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

ಉಪಮೇಯರ್‌ ಇಂದಿರಾ, ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ವೈ.ಆರ್. ಗೌರಮ್ಮ, ಪಾಲಿಕೆ ಸದಸ್ಯರಾದ  ಜಯಪ್ಪ ರೆಡ್ಡಿ, ಆನಂದ ವಿ., ನೂರ್ ಜಹಾನ್, ಡಿ.ವೆಂಕಟೇಶ, ದೇವಿಕಾರಾಣಿ ಶ್ರೀಧರ್, ಪೂರ್ವ ವಲಯ ಜಂಟಿ ಆಯುಕ್ತ ಕೆ.ಎಸ್. ವೆಂಕಟೇಶಪ್ಪ ಮತ್ತು ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

ಆಸ್ತಿ ತೆರಿಗೆ ಸಲ್ಲಿಕೆ
ವಸಂತನಗರದ ಸಹ ಕಂದಾಯ ಅಧಿಕಾರಿಗಳು ಪೊಲೀಸ್ ಕ್ವಾಟರ್ಸ್‌ನಲ್ಲಿ ₨ ೧೭.೮೯ ಲಕ್ಷ ಮತ್ತು ಕಬ್ಬನ್‌ ರಸ್ತೆಯಲ್ಲಿ ₨ 8.74 ಲಕ್ಷ ಆಸ್ತಿ ತೆರಿಗೆಯನ್ನು ವಸೂಲಿ ಮಾಡಿದ್ದು, ಸಭೆಯಲ್ಲೇ ಪಾಲಿಕೆಗೆ ಚೆಕ್ ಮುಖಾಂತರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.