ADVERTISEMENT

‘ಕೌಶಲ ವೃದ್ಧಿಗೆ ಸ್ಪರ್ಧಾಕೂಟ ಪೂರಕ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:36 IST
Last Updated 13 ಮಾರ್ಚ್ 2014, 19:36 IST

ಯಲಹಂಕ: ‘ವಿದ್ಯಾರ್ಥಿಗಳು ಸಂಸ್ಕೃತಿ­ಯನ್ನು ವಿನಿಮಯ  ಮಾಡಿಕೊಳ್ಳಲು ಹಾಗೂ ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿ­ಕೊಳ್ಳಲು ಸ್ಪರ್ಧಾಕೂಟಗಳು ಸಹಕಾರಿ’ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು.

ಇಲ್ಲಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿ ರುವ ಮೂರು ದಿನಗಳ ರಾಷ್ಟ್ರಮಟ್ಟದ ವಾರ್ಷಿಕ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ‘ಅನಾದ್ಯಂತ–2014’ ದಶ­ಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ‘ಆಧುನಿಕ ಕಾಲಘಟ್ಟದಲ್ಲಿ ಒಬ್ಬ ಅಮ್ಮನಾಗಿ ಅಲ್ಲದೆ ಇತರೆ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ’ ಎಂದು ತಿಳಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹು­ಮಾನ ವಿತರಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯ­ಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ‘ದೇಶದಲ್ಲಿ ಹರಡಿರುವ ಭ್ರಷ್ಟಾಚಾರ­ವನ್ನು ಮಟ್ಟಹಾಕುವ ಮಹತ್ತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಅನ್ಯಾಯಗಳ ವಿರುದ್ಧ ಧನಿಯೆತ್ತುವ ಮೂಲಕ ದೇಶದಲ್ಲಿ ಬದಲಾವಣೆ ತರಲು ವಿದ್ಯಾರ್ಥಿ ಮಟ್ಟದಲ್ಲಿ ಚಿಂತನೆ ಮಾಡಬೇಕಾಗಿದೆ’ ಎಂದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಎನ್‌.ಆರ್‌.ಶೆಟ್ಟಿ, ಪ್ರಾಂಶುಪಾಲ ಡಾ.ಎಚ್‌.ಸಿ. ನಾಗರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.