ADVERTISEMENT

‘ವಚನಕಾರರದ್ದು ಶ್ರಮಮೂಲ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬೆಂಗಳೂರು: ವಚನಕಾರರು ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಜನಪರವಲ್ಲದ ಹಲವು ಅಂಶಗಳನ್ನು ನಿರಾಕರಿಸಿ ಶ್ರಮಮೂಲ ನೆಲೆಯಲ್ಲಿ ಪರ್ಯಾಯ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದರು ಎಂದು  ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯ­ಕ್ರಮ­ದಲ್ಲಿ ವಚನಕಾರರ ಪ್ರತಿಭಟನೆ­ಗಳ ನೆಲೆಗಳ  ಕುರಿತು ಅವರು ಮಾತನಾಡಿ, ‘ಕಾಯಕದ ಮಹತ್ವ, ಸ್ತ್ರೀ–ಪುರುಷ ಸಮಾನತೆ, ವೈದಿಕ ಪರಂಪರೆಯ ವಿಶ್ಲೇಷಣೆಯನ್ನು ವಚನಕಾರರು ಮಾಡಿದರು. ಅವರ ಪ್ರತಿಪಾದನೆಯ ಹೊಸ ಚಿಂತನೆಯಲ್ಲಿ ನಡೆ–ನುಡಿಯ ಸಮನ್ವಯ ಮತ್ತು ಅಂತರಂಗ–ಬಹಿರಂಗಗಳ ಏಕರೂಪತೆಗೆ ಪ್ರಾಧಾನ್ಯತೆಯಿತ್ತು’ ಎಂದು ವಚನ ಚಳುವಳಿಯ ಸ್ವರೂಪವನ್ನು ವಿವರಿಸಿದರು.

‘ದೇವಾಲಯಗಳ ದೇವರನ್ನು ತೊರೆದು ಆತ್ಮಲಿಂಗ–ಆಪ್ತಲಿಂಗ ಪರಿ­ಕಲ್ಪನೆ­ಯನ್ನು ತಳ ಸಮುದಾಯದ ಕೈಗೆ ನೀಡಿದರು. ಇದು  ಅಂದಿನ ಕಾಲಕ್ಕೆ ಕ್ರಾಂತಿಕಾರಕ ಹೆಜ್ಜೆ­ಯಾಗಿತ್ತು’ ಎಂದು ವಿಶ್ಲೇಷಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ದಿಬ್ಬೂರು ಸಿದ್ದಲಿಂಗಪ್ಪ ಮತ್ತು ಇತರರು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.