ADVERTISEMENT

‘ಸಜ್ಜನರ ಮೌನದಿಂದ ಅನ್ಯಾಯ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಬೆಂಗಳೂರು: ‘ಸಮಾಜದಲ್ಲಿ ಆಗು­ತ್ತಿ­ರುವ ಅನ್ಯಾಯ­ಗಳ ಬಗ್ಗೆ ಸಜ್ಜನರು ಮೌನ ತಾಳಿರುವ ಕಾರಣ ಜಗತ್ತು ಹೀನಾಯ ಸ್ಥಿತಿಗೆ ತಲುಪುತ್ತಿದೆ. ಸಮಾಜ­ದಲ್ಲಿ ಹೆಚ್ಚು­ತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯುವ­ಜನರನ್ನು ಸಿದ್ಧ­ಪಡಿಸ­ಬೇಕಿದೆ’ ಎಂದು ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್‌.ಬನ್ನೂರಮಠ್‌ ಹೇಳಿದರು.

ನಗರದ ಬಿಎಂಎಸ್‌ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಬಿಎಂಎಸ್‌ ಎಂಜಿ­ನಿ­ಯರಿಂಗ್‌ ಕಾಲೇ­ಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರ ಮಟ್ಟದ ಬಿ.ಎಂ.ಶ್ರೀನಿವಾಸಯ್ಯ ಸ್ಮಾರಕ ಅಣಕು ನ್ಯಾಯಾ­ಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತ­ನಾಡಿ­ದರು.

‘ನ್ಯಾಯಾಲಯದಲ್ಲಿ ಕೆಲ ಸಂದರ್ಭದಲ್ಲಿ ನ್ಯಾಯಾ­­ಧೀ­ಶ­ರು ಅನಿ­ರೀ­ಕ್ಷಿತ ಪ್ರಶ್ನೆ ಕೇಳುತ್ತಾರೆ. ಆಗ ವಕೀ­ಲರು ಜಾಣ­ತನ ತೋರ­ಬೇಕಾ­ಗುತ್ತದೆ. ಇಂತಹ ಸನ್ನಿ­ವೇಶ­ಗಳನ್ನು ಎದುರಿಸಲು ಅಣಕು ನ್ಯಾಯಾಲಯ ವಿದ್ಯಾ­ರ್ಥಿ­­­ಗಳಿಗೆ ಮಾರ್ಗ­ದರ್ಶನ ನೀಡುತ್ತದೆ’ ಎಂದರು. 

ಕಾಲೇಜಿನ ಟ್ರಸ್ಟಿ ಕೆ.ಜೈರಾಜ್‌, ‘ಇತ್ತೀ­ಚಿನ ದಿನ­ಗಳಲ್ಲಿ ವಕೀಲರಲ್ಲಿ ಸಿದ್ಧತೆ ಕೊರತೆ ಕಾಣುತ್ತಿದೆ. ವಕೀಲ­ರಲ್ಲಿ ಸಂವ­ಹನ ಕೌಶಲದ ಕೊರತೆಯಿಂದ  ಅನೇಕ ಸಂದರ್ಭ­ಗಳಲ್ಲಿ ವ್ಯತಿರಿಕ್ತ ತೀರ್ಪು ಬರುತ್ತದೆ. ಅಣಕು ನ್ಯಾಯಾ­ಲಯ ಸ್ಪರ್ಧೆ­ಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿ­ಗಳಲ್ಲಿ ಕೌ­ಶಲ ಹೆಚ್ಚುತ್ತದೆ’ ಎಂದರು. 

ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ವಿ.­ಬಿ.ಕುಟಿನ್ಹೊ, ‘ಅಣಕು ನ್ಯಾಯಾ­­ಲಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತ ವಕೀಲರಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.