ADVERTISEMENT

‘ಹಿಂದುಳಿದವರ ಏಳಿಗೆಗೆ ಕಾನ್ಷಿರಾಂ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಬೆಂಗಳೂರು: ‘ದಾದಾ ಸಾಹೇಬ್‌ ಅಂಬೇಡ್ಕರ್‌ ಅವರ ಕನಸುಗಳನ್ನು ನನಸು ಮಾಡಲು ಕಾನ್ಷಿರಾಂ ಅವರು ತಮ್ಮ ಜೀವನವನ್ನೇ ಸವೆಸಿದರು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು. ಬಹುಜನ ಸಮಾಜ ಪಕ್ಷವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ಕಾನ್ಷಿರಾಂ ಅವರ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ವರ್ಗಗಳನ್ನು ಒಂದುಗೂಡಿಸಲು ಕಾನ್ಷಿರಾಂ ಅವರು ಅವಿರತ ಶ್ರಮಿಸಿ­ದರು. ಅವರು ಬಹುಜನರನ್ನು ಒಂದು­ಗೂ­­ಡಿಸಿದ ಮಹಾನ್‌ ನಾಯಕ’ ಎಂದರು. ‘ದೇಶಕ್ಕೆ ಸ್ವಾತಂತ್ರ್ಯ ಬಂದರೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಜನರ ಬದುಕಿನಲ್ಲಿ ಏನೂ ಸುಧಾರಣೆ­ಯಾಗಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಹಿಂದುಳಿದ, ಅಲ್ಪ­ಸಂಖ್ಯಾತ ವರ್ಗಗಳನ್ನು ಗುಲಾಮಗಿರಿಗೆ ಮತ್ತು ಮತಕ್ಕಾಗಿ ಮಾತ್ರ ಬಳಸಿ­ಕೊಳ್ಳುತ್ತಿವೆ’ ಎಂದು ಹೇಳಿದರು.

‘ಕಾನ್ಷಿರಾಂ ಅವರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಏಳಿಗೆ­ಗಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಸಾಮಾಜಿಕ ಸಮಾನತೆ ದೊರೆಯಬೇಕು. ಅವರಿಗೂ ಪೂರ್ಣ ಶಿಕ್ಷಣ ದೊರೆಯಬೇಕು. ದಲಿತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅಳಿಸಿಹಾಕಬೇಕು ಎಂದು ಕೊನೆಯವರೆಗೂ ಅವರು ಹೋರಾಡಿದರು’ ಎಂದರು.

ಪಕ್ಷದ ರಾಜ್ಯ ಘಟಕದ ಖಜಾಂಚಿ ಕೋರಮಂಗಲ ಮುನಿಯಪ್ಪ ಮಾತನಾಡಿ, ‘ಕಾನ್ಷಿರಾಂ ಅವರು ಇಂದು ನಮ್ಮ ಜತೆಗಿಲ್ಲ. ಆದರೆ, ಅವರು ನೀಡಿ ಹೋದ ತ್ಯಾಗ, ಆದರ್ಶಗಳು ನಮ್ಮ ಮುಂದಿವೆ. ಅವರು ತೋರಿದ ದಾರಿಯಲ್ಲಿ ಮುಂದೆ ಸಾಗಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.