ADVERTISEMENT

₹ 1.28 ಕೋಟಿ ಪಂಗನಾಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 19:42 IST
Last Updated 9 ಏಪ್ರಿಲ್ 2019, 19:42 IST

ಬೆಂಗಳೂರು: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ 9 ಮಂದಿಯಿಂದ ₹ 1.28 ಕೋಟಿ ಪಡೆದು ಪರಾರಿಯಾದ ಸರ್ಕಾರೇತರ ಸಂಸ್ಥೆಯ ಸದಸ್ಯರ ಪತ್ತೆಗೆ ಹಲಸೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅವರ ವಿರುದ್ಧ ದೊಮ್ಮಲೂರು ಲೇಔಟ್‌ನ ಶ್ರಾವಣಿ ಸುಂದರ್ ಎಂಬುವರು ದೂರು ಕೊಟ್ಟಿದ್ದಾರೆ. ‘2018ರ ಆಗಸ್ಟ್‌ನಲ್ಲಿ ಸಲೋಮಿ ರಾಬರ್ಟ್ ಎಂಬುವರು, ‘ನಾವು ಎನ್‌ಜಿಒ ನಡೆಸುತ್ತಿದ್ದೇವೆ. ನಮ್ಮಲ್ಲಿ ಹಣ ಹೂಡಿದರೆ, ಸ್ವಲ್ಪ ದಿನಗಳಲ್ಲೇ ದ್ವಿಗುಣ ಮಾಡಿಕೊಡುತ್ತೇವೆ’ ಎಂದಿದ್ದರು ಎಂದು ದೂರಿದ್ದಾರೆ.

ಕಚೇರಿ ತೋರಿಸಿದ್ದರು: ‘ದೊಮ್ಮಲೂರಿನ ‘ಪ್ರೋಫಿಲಿಕ್ ಎಚ್‌.ಆರ್.ಕನ್ಸಲ್ಟೆನ್ಸಿ’ಗೆ ಕರೆದೊಯ್ದ ಸಲೋಮಿ, ‘ಅಲ್ಲಿನ ಕೆಲವರನ್ನು ತಮ್ಮ ಸಹೋದ್ಯೋಗಿಗಳು ಎಂದು ಪರಿಚಯಿಸಿದರು. ಸಲೋಮಿಯ ಪತಿ ಸ್ಯಾಮ್ ಕ್ರಿಸ್ಟೋಫರ್ ಅಲಿಯಾಸ್ ಡ್ಯಾನಿ, ಅತ್ತೆ ವೆಂಕಟಲಕ್ಷ್ಮಿ ಅಲಿಯಾಸ್ ಲೂಸಿಯಾ ಸಹ ಹಣ ಹೂಡುವಂತೆ ಪುಸಲಾಯಿಸಿದರು.’

ADVERTISEMENT

‘ನಾನು ಹಾಗೂ ಗಾಯತ್ರಿ ಮಂಜುನಾಥ್ ತಲಾ ₹ 10 ಲಕ್ಷ, ಮೊಹಮದ್ ರಫೀಕ್ ₹ 13 ಲಕ್ಷ, ಎಸ್.ಅಮ್ಮು ₹ 8.5 ಲಕ್ಷ, ಎನ್.ಕಲ್ಪನಾ ₹ 26.5 ಲಕ್ಷ, ಪಿ.ರೂಪಾ ₹ 10.5 ಲಕ್ಷ, ರಾಜೇಶ್ವರಿ ₹ 10.5 ಲಕ್ಷ, ಕಾವ್ಯ ₹ 5.5 ಲಕ್ಷ ಹಾಗೂ ವಿ.ಕೆ.ವಾಣಿ ಎಂಬುವರು ₹ 32.4 ಲಕ್ಷ ಹೂಡಿಕೆ ಮಾಡಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಕುಖ್ಯಾತ ಕ್ರೈಂ ಜಾಲ: ‘ಬಡ್ಡಿ ಕೊಡದಿದ್ದಾಗ ಹಣ ವಾಪಸ್ ಕೇಳಿದೆವು. ಆಗ, ‘ನಾವು ಕ್ರೈಂ ಜಾಲ ಹೊಂದಿದ್ದೇವೆ. ಪೊಲೀಸರಿಗೆ ದೂರು ಕೊಟ್ಟರೆ ಜೀವಸಹಿತ ಉಳಿಸುವುದಿಲ್ಲ. ಮಾರ್ಚ್ 31ರಂದು ನಿಮ್ಮ ಹಣ ತಲುಪಿಸುತ್ತೇವೆ. ಅಲ್ಲಿಯವರೆಗೂ ಸುಮ್ಮನಿರಿ’ ಎಂದು ಬೆದರಿಸಿದ್ದರು. ಈಗ ಪರಾರಿಯಾಗಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.