ADVERTISEMENT

10 ರೂ.ಗೆ ಮಹತ್ವದ ಪುಸ್ತಕ !

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: `ಕನ್ನಡ ಪುಸ್ತಕದ ಅನುವಾದ ಸೇರಿದಂತೆ ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಈ ಬಾರಿಯು 2 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಶ್ರೇಷ್ಠ ಪುಸ್ತಕಗಳನ್ನು ಜನ ಸಾಮಾನ್ಯರೆಡೆಗೆ ಕೊಂಡೊಯ್ಯುವತ್ತ ಚಿಂತನೆ ನಡೆಸಲಾಗಿದೆ~ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ತಿಳಿಸಿದರು.

ಭಾರತೀಯ ವಿದ್ಯಾಭವನವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನುವಾದಿತ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ವಿದ್ಯಾಭವನದ ಸಹಯೋಗದಲ್ಲಿ ಈವರೆಗೆ ಒಟ್ಟು 25 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, ವರ್ಷದ ಅಂತ್ಯದೊಳಗೆ 75 ಪುಸ್ತಕಗಳನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಈ ಎಲ್ಲಾ ಕೃತಿಗಳನ್ನು ಕೇವಲ 10 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುವುದು~ ಎಂದು ಹೇಳಿದರು.

`ಸುಮಾರು 40 ವರ್ಷಗಳ ಕಾಲ ವಿದ್ಯಾಭವನದೊಂದಿಗೆ ಸಂಬಂಧ ಹೊಂದಿದ್ದೇನೆ. ಬಿಡುಗಡೆಯಾಗಿರುವ ಎಲ್ಲಾ ಪುಸ್ತಕಗಳು ಮಹತ್ತರ ಕೃತಿಗಳಾಗಿದ್ದು, ಜನಸಾಮಾನ್ಯರಿಗೆ ಉತ್ತಮ ಮಾಹಿತಿ ದೊರೆಯುತ್ತದೆ~ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಕಡಿಮೆ ದರದಲ್ಲಿ ಉತ್ತಮ ಪುಸ್ತಕಗಳನ್ನು ಬಿಡುಗಡೆ ಮಾಡಬೇಕೆಂಬ ಯೋಜನೆಯ ಹಿಂದಿನ ಪ್ರೇರಕ ಶಕ್ತಿ ದಿವಂಗತ ಮತ್ತೂರು ಕೃಷ್ಣಮೂರ್ತಿ. ಅವರ ಅನುಪಸ್ಥಿತಿಯಲ್ಲಿ ಈ ಯೋಜನೆಯು ಯಶಸ್ವಿಯಾಗಿದೆ~ ಎಂದರು.

`ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುತ್ತಿರುವ ಲಂಡನ್ನಿನ ವಿದ್ಯಾಭವನದ ಶಾಖೆಯ ಕಾರ್ಯವೈಖರಿ ಸ್ತುತ್ಯರ್ಹ. ಈ ಶಾಖೆಯಲ್ಲಿ ಒಟ್ಟು 925 ವಿದ್ಯಾರ್ಥಿಗಳು ವೇದಾಧ್ಯಯನ, ಕನ್ನಾಡಾಧ್ಯಯನ, ಹಿಂದೂಸ್ತಾನಿ ಸಂಗೀತ, ದಾಸರ ಪದಗಳು ಸೇರಿದಂತೆ ದೇಸಿ ಸಂಸ್ಕೃತಿಯನ್ನು ಆಳವಾಗಿ ಅಭ್ಯಸಿಸುತ್ತಿರುವುದು ನಿಜಕ್ಕೂ ಕನ್ನಡ ಕಟ್ಟುವ ಕೆಲಸ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲಂಡನ್ನಿನ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಎನ್.ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ನಿರ್ದೇಶಕ ಎಚ್.ಎನ್.ಸುರೇಶ್, ವಿದ್ಯಾಭವನದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.