ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಆಶಯಗಳಿಗೆ ಪೂರಕವಾಗಿ ರಾಜ್ಯದ 105 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ‘ಸತ್ವ ಮೀಡಿಯಾ ಆ್ಯಂಡ್ ಕನ್ಸಲ್ಟಿಂಗ್’ ಜತೆ ಒಪ್ಪಂದ ಮಾಡಿಕೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಸತ್ವ ಮೀಡಿಯಾ ಆ್ಯಂಡ್ ಕನ್ಸಲ್ಟಿಂಗ್ ಮುಖ್ಯಸ್ಥ ಶ್ರೀಕೃಷ್ಣ ಅವರು ಸಹಿ ಹಾಕಿದರು. ಸ್ಟಾರ್ಟಪ್ ವಿಷನ್ ಗ್ರೂಪ್ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಇದ್ದರು.
ರಾಜ್ಯದ ಯಾದಗಿರಿ, ಹಾವೇರಿ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 105 ಸರ್ಕಾರಿ ಶಾಲೆಗಳನ್ನು ಒಪ್ಪಂದದ ಅನ್ವಯ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.
ಶಾಲೆಗಳು, ಶಾಲೆಗಳ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಕಲಿಕೆ ಮತ್ತು ಫಲಿತಾಂಶ ಸುಧಾರಣೆ, ಮಕ್ಕಳ ನೋಂದಣಿ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸ್ಪೋಕನ್ ಇಂಗ್ಲೀಷ್, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಲ್ಯಾಬ್, ನೈತಿಕ ವಿಜ್ಞಾನ ತರಗತಿ, ಉದ್ಯಮಶೀಲತೆ ಗುಣಗಳು, ಆಲೋಚನೆಗಳ ಕುರಿತು ತರಬೇತಿ, ಕೌಶಲ ಮತ್ತು ಭವಿಷ್ಯದಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್), ಶಿಕ್ಷಣ ಇಲಾಖೆಯ ಜತೆ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ಈ ಶಾಲೆಗಳು, ಇತರೆ ಶಾಲೆಗಳಿಗೆ ಮಾದರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.