ADVERTISEMENT

115 ಮರಗಳ ಸ್ಥಳಾಂತರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
115 ಮರಗಳ ಸ್ಥಳಾಂತರಕ್ಕೆ ಚಾಲನೆ
115 ಮರಗಳ ಸ್ಥಳಾಂತರಕ್ಕೆ ಚಾಲನೆ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿಗೆ ಬಲಿಯಾಗಬೇಕಿದ್ದ 115ಕ್ಕೂ ಹೆಚ್ಚು ಮರಗಳನ್ನು ವೈಟ್‍ಫೀಲ್ಡ್‌ನ ಸತ್ಯಸಾಯಿ ಆಸ್ಪತ್ರೆಯ ಆವರಣಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಬೈಯಪ್ಪನಹಳ್ಳಿಯ ಕಡೆಯಿಂದ ವೈಟ್‍ಫೀಲ್ಡ್‌ಗೆ ಹೂಡಿ ಹಾಗೂ ಐಟಿಪಿಎಲ್ ಮಾರ್ಗವಾಗಿ ಸಾಗುತ್ತಿರುವ ಕಾಮಗಾರಿಗಾಗಿ 225 ಮರಗಳನ್ನು ಕಡಿಯಲು ಮೆಟ್ರೊ ನಿಗಮ ಉದ್ದೇಶಿಸಿತ್ತು. ಈ ಪೈಕಿ 60 ಮರಗಳನ್ನು ಈಗಾಗಲೇ ಕಡಿಯಲಾಗಿದೆ. 115 ಮರಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಹಾಗೂ ಸ್ಥಳಿಯ ಟೆಕಿಗಳು ಮುಂದಾಗಿದ್ದಾರೆ. ನಾಲ್ಕೈದು ವರ್ಷ ಪ್ರಾಯದ ಮೂರು ಸಣ್ಣ ಮರಗಳನ್ನು ಮಂಗಳವಾರ ಸ್ಥಳಾಂತರಿಸಲಾಯಿತು.

ಈ ಮರಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ವಿಜಯ್‌ ನಿಶಾಂತ್‌ ಹಾಗೂ ಸ್ಥಳೀಯರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಬಿಬಿಎಂಪಿ, ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ಬಂದಿರಲಿಲ್ಲ. ಹೀಗಾಗಿ ನಾಗರಿಕರೇ ಒಗ್ಗೂಡಿ ದೇಣಿಗೆ ಸಂಗ್ರಹಿಸಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಸಲು ಸಂಕಲ್ಪ ಮಾಡಿದ್ದಾರೆ.

ADVERTISEMENT

‘ತರಬೇತಿ ಪಡೆದ ಸಿಬ್ಬಂದಿ ಇಲ್ಲದ ಕಾರಣಕ್ಕೆ ಈ ಕಾರ್ಯ ಕೊಂಚ ನಿಧಾನಗತಿಯಲ್ಲಿ ಸಾಗುತ್ತಿದೆ. ಮರವೊಂದಕ್ಕೆ ಔಷಧಿಗೆ ₹1,000 ವೆಚ್ಚ ಆಗಲಿದೆ. ರಾಜ್ಯ ಸರ್ಕಾರವು ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯ ತಂಡ ರಚಿಸಿ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

‘ಸತ್ಯಸಾಯಿ ಇನ್‍ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸ್ ಸಂಸ್ಥೆಯು ಸ್ಥಳಾಂತರಗೊಂಡ ಮರಗಳ ನಿರ್ವಹಣೆ ಕಾರ್ಯ ಮಾಡಲಿದ್ದು ಎರಡು ತಿಂಗಳ ಬಳಿಕ ಚಿಗುರು ಮೂಡಿ ಸೊಂಪಾಗಿ ಬೆಳೆಯಲಿದೆ’ ಎಂದು ತಿಳಿಸಿದರು.

ಮರಗಳ ಸ್ಥಳಾಂತರ ಕಾಮಗಾರಿಗೆ ಮೆಟ್ರೊ ನಿಗಮ ಸಹಕಾರ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.