ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಾಹಿತ್ಯ ಪ್ರಿಯರು ಕುತೂಹಲದಿಂದ ವಿಷಯ ತಜ್ಞರ ಮಾತುಗಳನ್ನು ಆಲಿಸಿದರು
– ಪ್ರಜಾವಾಣಿ ಚಿತ್ರ:ಪ್ರಶಾಂತ್ ಎಚ್.ಜಿ.
ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆತಿದ್ದು, ಐದು ವೇದಿಕೆಗಳಲ್ಲಿ ನಡೆದ ವಿಚಾರಗೋಷ್ಠಿಗಳು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದ ಆಗುಹೋಗುಗಳ ಮೇಲೆ ಬೆಳಕು ಹರಿಸಿದವು.
ಕುಮಾರ ಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್ ಆವರಣದಲ್ಲಿ ನಡೆದ ಈ ಉತ್ಸವವು ಬಹುಭಾಷಿಕ ಜಗತ್ತನ್ನು ಅನಾವರಣ ಮಾಡಿತು.
ನಗರದ ವಿವಿಧೆಡೆಯಿಂದ ಬಂದ ಸಾಹಿತ್ಯಾಸಕ್ತರು, ಬೆಳಿಗ್ಗೆಯಿಂದ ಸಂಜೆಯವರೆಗೆ ಉತ್ಸಾಹದಿಂದ ಗಹನವಾದ ಚರ್ಚೆಗಳನ್ನು ಆಲಿಸಿದರು. ದೇಶದ ವಿವಿಧೆಡೆಗಳಿಂದ ಬಂದಿದ್ದ ವಿದ್ವಾಂಸರು, ಲೇಖಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಹಂಚಿಕೊಂಡ ಹೊಳಹುಗಳ ಬೆಳಕಿನೊಂದಿಗೆ ಈ ಉತ್ಸವ ಕಳೆಗಟ್ಟಿತು. ತಮ್ಮಿಷ್ಟದ ಸಾಹಿತಿಗಳ ಮಾತುಗಳನ್ನು ಆಲಿಸಿದ ಅಭಿಮಾನಿ ಬಳಗ, ಪುಸ್ತಕಗಳಿಗೆ ಅವರ ಹಸ್ತಾಕ್ಷರಗಳನ್ನು ಪಡೆದು ಸಂಭ್ರಮಿಸಿತು.
ಕನ್ನಡ ಸೇರಿ ವಿವಿಧ ಭಾಷೆಗಳ ಹೊಸ ಪುಸ್ತಕಗಳ ಖರೀದಿ ಭರಾಟೆಯೂ ಜೋರಾಗಿ ನಡೆಯಿತು. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಗೋಷ್ಠಿಗಳಲ್ಲಿ ದೇಶದ ವಿವಿಧೆಡೆಯಿಂದ ಬಂದ ವಿದ್ವಾಂಸರು ವಿಷಯ ಮಂಡಿಸಿದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಒಂದೆಡೆ ಸೇರಿಸಿ, ವಿಚಾರ ವಿನಿಮಯ ಮಾಡಲು ಉತ್ಸವದ ವೇದಿಕೆ ಸಹಕಾರಿಯಾಯಿತು. ಮಕ್ಕಳಿಗೆ ಪ್ರತ್ಯೇಕವಾಗಿ ಮೂರು ವೇದಿಕೆಗಳನ್ನು ರೂಪಿಸಲಾಗಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು, ಕಥೆಗಳನ್ನು ಹೇಳಿ ರಂಜಿಸಿದರು.
ಅಮರ ಚಿತ್ರಕಥಾ ರಸಪ್ರಶ್ನೆ, ಮನರಂಜನೆಯ ಕಾರ್ಯಕ್ರಮಗಳನ್ನೂ ಮಕ್ಕಳಿಗಾಗಿ ರೂಪಿಸಲಾಗಿತ್ತು. ಇದರಿಂದಾಗಿ ವಿವಿಧ ವಯೋಮಾನದ ಮಕ್ಕಳು ಆಟಗಳನ್ನು ಆಡಿ ಸಂಭ್ರಮಿಸಿದರು.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಐದು ವೇದಿಕೆಯಲ್ಲಿ ವಿಚಾರಗೋಷ್ಠಿಗಳು ನಡೆಯಲಿವೆ. ವಿವಿಧ ವಿಷಯಗಳ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಪ್ರವೇಶ ಉಚಿತ ಇರಲಿದೆ.
ಸಾಹಿತ್ಯ ಉತ್ಸವದಲ್ಲಿ ಮಕ್ಕಳು ಆಟವಾಡಿ ಸಂಭ್ರಮಿಸಿದರು
ಸಾಹಿತ್ಯ ಪ್ರಿಯರು ಪುಸ್ತಕಗಳನ್ನು ಪರಿಶೀಲಿಸಿ ಖರೀದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.