ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಬುಧವಾರ ನಡೆದ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ, ಇದೇ 22ರಂದು ಮುಷ್ಕರ ನಡೆಸಲು ನಿಗಮದ ಸಿಬ್ಬಂದಿ ನಿರ್ಧರಿಸಿದ್ದಾರೆ.
ನಿಗಮದ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಮೆಟ್ರೊ ರೈಲು ಚಾಲಕರು, ನಿಲ್ದಾಣ ನಿಯಂತ್ರಕರು, ಸೆಕ್ಷನ್ ಎಂಜಿನಿಯರ್ಗಳು, ಸಿಗ್ನಲಿಂಗ್, ಟೆಲಿಕಾಂ, ಸ್ವಯಂಚಾಲಿತ ದರ ವಸೂಲಿ (ಎಎಫ್ಸಿ), ಹಳಿಯ ಶಾಶ್ವತ ನಿರ್ವಹಣೆ, ಟ್ರ್ಯಾಕ್ಷನ್, ಸಿವಿಲ್ ಕಾಮಗಾರಿ ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
‘ಸಭೆಯಲ್ಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮೂರು ತಿಂಗಳ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ನಮ್ಮ ಸಹಮತಿ ಇಲ್ಲ’ ಎಂದು ಬಿಎಂಆರ್ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ತಿಳಿಸಿದರು.
‘ಮುಖ್ಯ ಕಾರ್ಮಿಕ ಆಯುಕ್ತರ (ಕೇಂದ್ರ) ಕಚೇರಿಯಲ್ಲಿ ಇದೇ 16ರಂದು ಸಭೆ ಕರೆಯಲಾಗಿದೆ. ಇಲ್ಲೂ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, 22ರಂದು ಮುಷ್ಕರ ನಡೆಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.