ADVERTISEMENT

ಮೂರು ಅಪಘಾತ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 18:57 IST
Last Updated 7 ಆಗಸ್ಟ್ 2019, 18:57 IST

ಬೆಂಗಳೂರು: ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳುತ್ತಿದ್ದ ಆಟೊ ಮೊಬೈಲ್‌ ವ್ಯಾಪಾರಿ ನಾಗವಾರ ಸಾರಾಯಿಪಾಳ್ಯದ ನಿವಾಸಿ ಸಯ್ಯದ್‌ ಇಮ್ರಾನ್‌ (39) ಅವರಿಗೆ ಥಣಿಸಂದ್ರ ಬಸ್ ನಿಲ್ದಾಣ ಬಳಿ ಟೆಂಪೊ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಮ್ರಾನ್‌ ಅವರಿಗೆ ಎಂಟು ಮತ್ತು ಐದು ವರ್ಷದ ಇಬ್ಬರು ಮಕ್ಕಳು ಇದ್ದಾರೆ. ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡ್ಸ್‌ ವಾಹನ ಡಿಕ್ಕಿ– ಯುವಕ ಸಾವು: ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ಸ್ಕೂಟರ್‌ ಸವಾರ ಹೆಬ್ಬಗೋಡಿನ ರೋಹಿತ್‌ (18) ಮೃತಪಟ್ಟಿದ್ದಾರೆ. ಅವರು ಕೋರಮಂಗಲದ ವೇಮನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ. ಗಾಯಗೊಂಡಿದ್ದ ಅವರನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕಾರು ಡಿಕ್ಕಿ– ವ್ಯಾಪಾರಿ ಸಾವು: ಕಾರು ಡಿಕ್ಕಿ ಹೊಡೆದು ಸ್ಕೂಟರ್‌ ಸವಾರ, ಮೊಟ್ಟೆ ವ್ಯಾಪಾರಿ ಹೊನ್ನ ಬೀರಯ್ಯ (54) ಮೃತಪಟ್ಟ ಘಟನೆ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

ಕುಕ್ಕನಹಳ್ಳಿಯ ನಿವಾಸಿ ಹೊನ್ನ ಬೀರಯ್ಯ, ವ್ಯಾಪಾರಕ್ಕೆಂದು ಬೆಳಿಗ್ಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.