ಬೆಂಗಳೂರು: ಬಾಣಸವಾಡಿಯ ನಾಗಯ್ಯನಪಾಳ್ಯದಲ್ಲಿ ಏ.11ರಂದು ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಬಿಹಾರದ ಕಾರ್ಮಿಕರ ಪೈಕಿ ಮೂವರು ಮಂಗಳವಾರ ಮೃತಪಟ್ಟಿದ್ದಾರೆ.
ಸಂಜಯ್ (26), ಶರಣ್ (24) ಹಾಗೂ ರಾಮ್ ಭರತ್ (24) ಮೃತರು. ನಿರಂಜನ್ (28) ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಕೂಲಿ ಅರಸಿ ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಈ ಕಾರ್ಮಿಕರು, ನಾಗಯ್ಯನಪಾಳ್ಯದಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದರು. ಹೊಸದಾಗಿ ಸ್ಟೌ ಹಾಗೂ ಸಿಲಿಂಡರ್ ಖರೀದಿಸಿದ್ದ ಅವರು, ಏ.10ರ ರಾತ್ರಿ ಒಟ್ಟಿಗೇ ಊಟ ಮಾಡಿ ಮಲಗಿದ್ದರು. ರೆಗ್ಯುಲೇಟರ್ ಸರಿಯಾಗಿ ಬಂದ್ ಮಾಡಿರದ ಕಾರಣ ರಾತ್ರಿಯಿಡೀ ಅನಿಲಸೋರಿಕೆಯಾಗಿತ್ತು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಾರು ಬಿಸಿ ಮಾಡಲೆಂದು ಸಂಜಯ್ ಸ್ಟೌ ಹೊತ್ತಿಸಲು ಹೋಗಿದ್ದರು. ಧಗ್ಗನೇ ಬೆಂಕಿ ಹೊತ್ತಿಕೊಂಡು ಅದರ ಕೆನ್ನಾಲಗೆಇಡೀ ಮನೆಯನ್ನು ಆವರಿಸಿತ್ತು. ಸ್ಫೋಟದ ಶಬ್ದ ಕೇಳಿ ನೆರವಿಗೆ ಧಾವಿಸಿದ್ದ ಸ್ಥಳೀಯರು, ಮೈಮೇಲೆ ನೀರೆರಚಿ ಬೆಂಕಿ ಆರಿಸಿ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.
‘ನಿರಂಜನ್ ದೇಹ ಶೇ 35ರಷ್ಟು ಸುಟ್ಟು ಹೋಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಉಳಿದ ಮೂವರ ದೇಹ ಶೇ 60ರಷ್ಟು ಸುಟ್ಟಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ. ಕೆ.ಟಿ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಉಸಿರಾಟದ ತೊಂದರೆ: ‘ಅದು 10x10 ವಿಸ್ತೀರ್ಣದ ಪುಟ್ಟಮನೆ. ಅದಕ್ಕೆ ಒಂದೇ ಒಂದು ಕಿಟಕಿಯೂ ಇಲ್ಲ. ಇದರಿಂದ ಅನಿಲ ಹೊರಗೆ ಹೋಗದೆ ಕೊಠಡಿಯಲ್ಲೇ ತುಂಬಿಕೊಂಡಿತ್ತು. ಗಾಳಿಯ ಜತೆ ಸೇರಿ ವಿಷಾನಿಲವಾಗಿ ಬದಲಾಗಿತ್ತು. ಸುಟ್ಟ ಗಾಯಗಳಿಗಿಂತ, ಉಸಿರಾಟದ ತೊಂದರೆ ಆಗಿದ್ದೇ ಸಾವಿಗೆ ಪ್ರಮುಖ ಕಾರಣ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.