ADVERTISEMENT

ಉದ್ಯಮಿಗೆ ₹ 50 ಲಕ್ಷ ವಂಚನೆ!

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 2:00 IST
Last Updated 22 ನವೆಂಬರ್ 2019, 2:00 IST

ಬೆಂಗಳೂರು: ಅರಮನೆ ಮೈದಾನದ ಐದನೇ ಗೇಟ್ ಬಳಿಯ ಕಿಂಗ್ಸ್ ಕೋರ್ಟ್ ಮತ್ತು ನಲ್ಪಾಡ್
ಕಲ್ಯಾಣ ಮಂಟಪಗಳನ್ನು ಭೋಗ್ಯಕ್ಕೆ ನೀಡುವುದಾಗಿ ಉದ್ಯಮಿಯನ್ನು ನಂಬಿಸಿ ವ್ಯಕ್ತಿಯೊಬ್ಬ ₹ 50 ಲಕ್ಷ ಪಡೆದು ವಂಚಿಸಿದ್ದಾನೆ.

ಕೊಡಿಗೆಹಳ್ಳಿಯ ಉದ್ಯಮಿ ತೇಜ್ ಬಹಾದ್ಧೂರ್ ಸಿಂಗ್ ವಂಚನೆಗೆ ಒಳಗಾದವರು. ಅವರು ನೀಡಿದ ದೂರಿನ ಮೇರೆಗೆ ವೀರಣ್ಣಪಾಳ್ಯದ ನಿವಾಸಿ ಮಹದೇವರಾಜು ಎಂಬುವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಂಪಿಗೆಹಳ್ಳಿ ಪೊಲೀಸರು ತಿಳಿಸಿದರು.

ಉದ್ಯಮಿ ತೇಜ್ ಬಹದ್ದೂರ್ ಅವರನ್ನು 2018ರಲ್ಲಿ ಭೇಟಿಯಾಗಿದ್ದ ಮಹದೇವ್, ‘ನನಗೆ ರಾಜಮಾತೆ ವಿಶಾಲಾಕ್ಷಿದೇವಿ ಮತ್ತು ಅವರ ಮಕ್ಕಳ ಪರಿಚಯವಿದೆ’ ಎಂದು ಹೇಳಿದ್ದ.

ADVERTISEMENT

‘ಅವರು ಅರಮನೆ ಮೈದಾನದ 5ನೇ ಗೇಟ್ ಬಳಿಯಿರುವ ‌ಕಿಂಗ್ಸ್ ಕೋರ್ಟ್ ಮತ್ತು ನಲ್ಪಾಡ್ ಕಲ್ಯಾಣ
ಮಂಟಪಗಳನ್ನು ನನ್ನ ಹೆಸರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ಅದನ್ನು ನಿಮಗೆ ಭೋಗ್ಯಕ್ಕೆ (ಲೀಜ್) ಕೊಡುತ್ತೇನೆ’ ಎಂದೂ ನಂಬಿಸಿದ್ದ.

ಉದ್ಯಮಿಯನ್ನು 2018ರ ಸೆ.10ರಂದು ನಾಗವಾರ ಸಿಗ್ನಲ್ ಬಳಿ ಇರುವ ಆನಂದ ಭವನ್ ಹೋಟೆಲ್‌ಗೆ ಮಹದೇವ್ ಕರೆಸಿಕೊಂಡಿದ್ದ. ಈ ವೇಳೆ ವ್ಯವಹಾರದ ಬಗ್ಗೆ ಮಾತ
ನಾಡಿ, ಭೋಗ್ಯಕ್ಕೆ ನೀಡುವ ಕುರಿತು ಕರಾರು ಪತ್ರ ಬರೆದು ಕೊಡುವುದಾಗಿ ಹೇಳಿ ಮುಂಗಡ ₹ 50 ಲಕ್ಷ ಪಡೆದುಕೊಂಡಿದ್ದ.

ಆದರೆ, ತಿಂಗಳುಗಳು ಕಳೆದರೂ ಮಹದೇವ್‌ ಕರಾರು ಪತ್ರ ಬರೆದುಕೊಟ್ಟಿಲ್ಲ. ಸಬೂಬು ಹೇಳಿ ತಪ್ಪಿಸಿಕೊಂಡಿದ್ದ. ಈ ಬಗ್ಗೆ ರಾಜಮಾತೆ ವಿಶಾಲಾಕ್ಷಿದೇವಿ ಮತ್ತು ಅವರ ಪುತ್ರ ರುದ್ರಪ್ರತಾಪ್ ಸಿಂಗ್ ಅವರನ್ನು ಭೇಟಿ ಮಾಡಿ ತಾಜ್‌ ಬಹದ್ದೂರ್‌ ಸಿಂಗ್‌ ವಿಚಾರಿಸಿದ್ದಾರೆ.

ಈ ವೇಳೆ, ‘ಮಹದೇವ ಎಂಬವರು ಯಾರು ಎಂದೇ ಗೊತ್ತಿಲ್ಲ. ಜಾಗವನ್ನು ನಾವು ಯಾರಿಗೂ ಜಿಪಿಎ ಮಾಡಿಕೊಟ್ಟಿಲ್ಲ’ ಎಂದಿದ್ದಾರೆ. ಆಗಲೇ ವಂಚನೆಗೊಳಗಾಗಿರುವುದು ತೇಜ್‌ ಬಹದ್ದೂರ್‌ ಸಿಂಗ್‌ಗೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.