ADVERTISEMENT

ಚಾಕುವಿನಿಂದ ಇರಿತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 20:31 IST
Last Updated 2 ಜನವರಿ 2018, 20:31 IST
ವಿಘ್ನೇಶ್‌ ಅವರನ್ನು ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ಕರೆದೊಯ್ದರು
ವಿಘ್ನೇಶ್‌ ಅವರನ್ನು ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ಕರೆದೊಯ್ದರು   

ರಾಮನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ಯಾರ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸಹಪಾಠಿಯನ್ನೇ ಚಾಕುವಿನಿಂದ ಮೂರು ಕಡೆ ಇರಿದು ಗಾಯಗೊಳಿಸಿದ್ದಾನೆ.

ಬೆಳಿಗ್ಗೆ 10ರ ಸುಮಾರಿಗೆ ಮಕ್ಕಳ ವಿಭಾಗದ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿನ ರೋಗಿಗಳು , ಅವರ ಸಂಬಂಧಿಕರು ಹಾಗೂ ಅಲ್ಲಿನ ಸಿಬ್ಬಂದಿ ಬೆಚ್ಚಿ ಬಿದ್ದರು. ಜಿಲ್ಲಾ ಆಸ್ಪತ್ರೆಯ ಪ್ಯಾರ ಮೆಡಿಕಲ್ ಎರಡನೇ ವರ್ಷದ ವಿದ್ಯಾರ್ಥಿ ವಿಘ್ನೇಶ್‌ (20) ಇರಿತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಚಾಕುವಿನಿಂದ ಇರಿದು ಸಿದ್ದರಾಜು ಪರಾರಿಯಾಗಿದ್ದಾನೆ.

ಈ ಇಬ್ಬರು ಸಹಪಾಠಿಗಳ ನಡುವೆ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಸ್ನೇಹಿತರ ಗುಂಪು ಕಟ್ಟಿಕೊಂಡು ಬಂದ ಸಿದ್ದರಾಜು, ವಿಘ್ನೇಶ್‌ ಅವರನ್ನು ಕೆಣಕಿದ್ದಾನೆ. ಆಗ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರೂ ನಂ. 14 ಕೊಠಡಿಗೆ ತೆರಳಿದ್ದು, ಅಲ್ಲಿ ಈ ಘಟನೆ ನಡೆದಿದೆ. ಕೊಠಡಿಯಲ್ಲಿ ಇದ್ದವರು ಬೆಚ್ಚಿ ಬಿದ್ದು ಹೊರಗೆ ಓಡಿ ಬಂದಿದ್ದಾರೆ.

ADVERTISEMENT

‘ಸಿದ್ದರಾಜು ಕಾಮಾಕ್ಷಿಪಾಳ್ಯದವನಾಗಿದ್ದು, ಆತನಿಗೂ ನನಗೂ ನಿನ್ನೆ ಗಲಾಟೆ ಆಗಿತ್ತು. ಬೆಳಿಗ್ಗೆ ಗುಂಪು ಕಟ್ಟಿಕೊಂಡು ಬಂದು ನನ್ನನ್ನು ಹೆದರಿಸಿದ. ನಾನು ಯಾವುದಕ್ಕೂ ಹೆದರದೆ ಹೋದಾಗ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ’ ಎಂದು ಗಾಯಾಳು ವಿಘ್ನೇಶ್‌ ಪತ್ರಕರ್ತರಿಗೆ ವಿವರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ವಿವೇಕ್‌ ದೊರೆ ಆಸ್ಪತ್ರೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪೊಲೀಸರ ವಶಕ್ಕೆ ಒಪ್ಪಿಸಿದರು.

‘ಆಸ್ಪತ್ರೆಯ ಒಳಗೆ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಪೊಲೀಸರಿಗೆ ನಾವೂ ದೂರು ನೀಡಿದ್ದೇವೆ’ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.