ADVERTISEMENT

3ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

ಭೂಮಿ,ವಸತಿ ಹಕ್ಕಿಗಾಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:32 IST
Last Updated 12 ಜನವರಿ 2018, 19:32 IST

ಬೆಂಗಳೂರು: ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟವು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಬಡವರ ಮೂಲ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದೊರೆಸ್ವಾಮಿ ಮಾತನಾಡಿ, ‘ಮಹಾತ್ಮ ಗಾಂಧೀಜಿ ಅವರ ಆಶಯಗಳ ಹೆಸರಿನಲ್ಲಿ ಕಾಂಗ್ರೆಸ್ ಸುದೀರ್ಘವಾಗಿ ಆಳ್ವಿಕೆ ನಡೆಸಿದೆ. ಆದರೆ, ಅವರ ಆಶಯಗಳನ್ನು ಮರೆತಿದೆ. ರಾಜ್ಯದ ಕಂದಾಯ ಸಚಿವರು ಬಾಯಿ ಬಡುಕುತನ ಬಿಟ್ಟು ಭೂಮಿ ಹಾಗೂ ವಸತಿರ ಪರವಾಗಿ ಕೆಲಸ ಮಾಡಬೇಕಿದೆ’ ಎಂದರು.

ADVERTISEMENT

ಎಲ್ಲ ಕಡೆ ಮತದಾರರ ಸಂಘಟನೆಗಳಾಗಬೇಕು. ನಮ್ಮ ಹಕ್ಕುಗಳನ್ನು ಕೇಳಿ ಪಡೆಯಬೇಕು. ಸತ್ಯಾಗ್ರಹಿಗೆ ಸೋಲಿಲ್ಲ. ಇದು ನನ್ನ ಕೊನೆಯ ಹೋರಾಟ. ಎಲ್ಲರೂ ಗೌರವದಿಂದ ಬಾಳುವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.

ಪರ್ಯಾಯ ರಾಜಕಾರಣ ಬೇಕು: ಪರ್ಯಾಯ ಜನಶಕ್ತಿ ಹಾಗೂ ಮತದಾರರನ್ನು ಹುಟ್ಟುಹಾಕಿ ಪರ್ಯಾಯ ರಾಜಕಾರಣದತ್ತ ಮುಖಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದರು.

ಬಡಜನರ ವಿಚಾರದಲ್ಲಿ ಎಲ್ಲ ಪಕ್ಷಗಳು ಒಂದೇ ರೀತಿಯ ಮನೋಭಾವವನ್ನು ಹೊಂದಿವೆ. ನಮ್ಮ ಕೂಗಿಗೆ ಬೆಲೆ ಸಿಗಬೇಕಾದರೆ ಹಾಗೂ ನಮ್ಮ ಹಿತಾಸಕ್ತಿಗಳು ಈಡೇರಬೇಕಾದರೆ ಚಳವಳಿಯಿಂದ ಬಂದವರು ವಿಧಾನಸೌಧದಲ್ಲಿ ಕೂರಬೇಕು. ಈ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.