ADVERTISEMENT

ಅನುದಾನಕ್ಕೆ ಒತ್ತಾಯಿಸಿ ಇಂದು ಶಿಕ್ಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:39 IST
Last Updated 22 ಜನವರಿ 2018, 19:39 IST

ಬೆಂಗಳೂರು: ಅನುದಾನ ಬಿಡುಗಡೆಯ ಕಡತಗಳಿಗೆ ಹಣಕಾಸು ಇಲಾಖೆ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಅನುದಾನಕ್ಕೆ ಒಳಪಡುವ ಶಾಲೆಗಳ ಒಕ್ಕೂಟದ ಶಿಕ್ಷಕರು ಮಂಗಳವಾರ ನಗರದ ಶಾಸಕರ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

‘ರಾಜ್ಯದಲ್ಲಿ 1995ಕ್ಕೂ ಮೊದಲು ಆರಂಭವಾಗಿರುವ ಶಾಲೆಗಳ ಪೈಕಿ 800 ಶಾಲೆಗಳಿಗೆ ಅನುದಾನ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಉಳಿದಿರುವ 68 ಶಾಲೆಗಳಿಗೆ ಅನುದಾನ ನೀಡುವಂತೆ 2017ರ ಸೆಪ್ಟೆಂಬರ್‌ 27ರಂದು ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಆದೇಶಿಸಿದ್ದರು. ಅನುದಾನ ಸಂಬಂಧದ ಕಡತಗಳಿಗೆ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿ ಹಣಕಾಸು ಇಲಾಖೆಗೆ ಕಳಿಸಿದೆ. ಆದರೆ, ಈ ಕಡತಗಳಿಗೆ ಹಣಕಾಸು ಇಲಾಖೆ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ’ ಎಂದು ಒಕ್ಕೂಟದ ಸದಸ್ಯ ಯಶವಂತ್ ದೂರಿದ್ದಾರೆ.

‘ಕಡತಗಳಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದರೆ 68 ಶಾಲೆಗಳ ಸಾವಿರಾರು ಸಿಬ್ಬಂದಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಇಲಾಖೆಗೆ ಸೂಚನೆ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.