ADVERTISEMENT

ಆಸ್ಪತ್ರೆಯಲ್ಲೇ ನರ್ಸ್‌ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:45 IST
Last Updated 22 ಜನವರಿ 2018, 19:45 IST
ನಿಷ್ಕಲಾ
ನಿಷ್ಕಲಾ   

ಬೆಂಗಳೂರು: ನಾಗರಬಾವಿ ಬಳಿಯ ಶ್ರೀದೇವಿ ಆಸ್ಪತ್ರೆಯಲ್ಲೇ ನರ್ಸ್‌ ನಿಷ್ಕಲಾ (25) ಎಂಬುವರು ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದರು. ತಮ್ಮ ಕೊಠಡಿಯಲ್ಲೇ ನೇಣು ಹಾಕಿಕೊಂಡಿದ್ದರು. ಗಂಟೆಯಾದರೂ ಹೊರಬಾರದಿದ್ದರಿಂದ ಅನುಮಾನಗೊಂಡ ಸಹೋದ್ಯೋಗಿಗಳು ಕೊಠಡಿಗೆ ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ.

ನಿಷ್ಕಲಾ ಅವರಿಗೆ ತಮ್ಮದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಎಂಬುವರ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ವಾರದ ಹಿಂದಷ್ಟೇ ಪ್ರೀತಿ ನಿರಾಕರಿಸಿದ್ದ ಗಂಗಾಧರ್, ಕೆಲಸ ಬಿಟ್ಟು ಹೋಗಿದ್ದರು ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದರು.

ADVERTISEMENT

ಜಾತಿ ನೆಪ: ಅವರಿಬ್ಬರ ಪ್ರೀತಿಯ ವಿಷಯವು ಮನೆಯವರಿಗೂ ಗೊತ್ತಾಗಿತ್ತು. ಮದುವೆಯಾಗುವಂತೆ ನಿಷ್ಕಲಾ ಒತ್ತಾಯಿಸುತ್ತಿದ್ದರು. ಜಾತಿ ಬೇರೆ ಎಂಬ ಕಾರಣವೊಡ್ಡಿದ್ದ ಗಂಗಾಧರ್‌, ಮದುವೆಯಾಗುವುದಿಲ್ಲ ಎಂದಿದ್ದರು.

ಈ ವಿಷಯವನ್ನು ನಿಷ್ಕಲಾ, ಸಹೋದರನಿಗೆ ತಿಳಿಸಿದ್ದರು. ಬಳಿಕ ಸಹೋದರ ಹಾಗೂ ಗಂಗಾಧರ್ ನಡುವೆ ಜಗಳವೂ ಆಗಿತ್ತು. ಅದಾದ ನಂತರ ಗಂಗಾಧರ್, ಆಸ್ಪತ್ರೆಯನ್ನೇ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.

‘ಪ್ರೀತಿಯ ಹೆಸರಿನಲ್ಲಿ ಮಗಳಿಗೆ ಗಂಗಾಧರ್ ಮೋಸ ಮಾಡಿದ್ದಾನೆ’ ಎಂದು ನಿಷ್ಕಲಾ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಗಂಗಾಧರ್ ತಲೆಮರೆಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.