ಬೆಂಗಳೂರು: ಗೂಂಡಾ ವರ್ತನೆಯಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಉಂಟಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಬುಧವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪದ್ಮಾವತ್’ ಸಿನಿಮಾ ಬಿಡುಗಡೆಗೆ ವ್ಯಕ್ತವಾಗುತ್ತಿರುವ ವಿರೋಧ ಪ್ರಸ್ತಾಪಿಸಿದ ಅವರು, ಪ್ರತಿಭಟನೆಗಳು ಪ್ರಜಾತಾಂತ್ರಿಕವಾಗಿ ನಡೆಯುವ ಬದಲು ಹಲ್ಲೆಯ ಸ್ವರೂಪ ಪಡೆದುಕೊಳ್ಳುತ್ತಿವೆ. ‘ತಲೆ ತೆಗೆಯುತ್ತೇವೆ, ಕೊಲೆ ಮಾಡಿದವರಿಗೆ ಬಹುಮಾನ ನೀಡುತ್ತೇವೆ’ ಎಂದು ಘೋಷಿಸುವ ಮೂಲಕ ಪ್ರತಿಭಟಿಸುತ್ತಿರುವುದು ಸರಿಯಲ್ಲ’ ಎಂದರು.
‘ಕಾರ್ಯಾಂಗ, ಶಾಸಕಾಂಗ, ಮಾಧ್ಯಮದ ಜೊತೆಗೆ ನ್ಯಾಯಾಂಗ ಕೂಡ ವಿಶ್ವಾಸಾರ್ಹತೆಯ ಸವಾಲು ಎದುರಿಸುತ್ತಿರುವುದು ಇಂದಿನ ದುರಂತ. ಸತ್ಯವನ್ನು ಉಳಿಸುವ ಅಗತ್ಯ ಇದೆ. ಸತ್ಯಕ್ಕೆ ಸಾವು ಬಾರದಂತೆ ನೋಡಿಕೊಂಡು ಅದನ್ನು ಉಳಿಸುವ ಮರ್ಯಾದಸ್ಥ ಮನುಷ್ಯರಾಗುವತ್ತ ನಾವು ಹೆಜ್ಜೆ ಇಡಬೇಕಾಗಿದೆ’ ಎಂದು ಹೇಳಿದರು.
ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ವಿದ್ಯುನ್ಮಾನಗಳು ಟಿಆರ್ಪಿಗೆ ಕಿತ್ತಾಟ ನಡೆಸುವುದು ಸೂಕ್ತವಲ್ಲ, ಮಾಧ್ಯಮಗಳು ರಾಜಕೀಯ ಪಕ್ಷಗಳ ಮುಖವಾಣಿಯಾಗುವುದು ಬೇಡ ಎಂದರು.
‘ಪ್ರಜಾವಾಣಿ’ಯ ಬಿ.ಎನ್.ಶ್ರೀಧರ, ರಾಜೇಶ್ ರೈ ಚಟ್ಲ, ಶಿವಕುಮಾರ ಕಣಸೋಗಿ ಸೇರಿದಂತೆ 45 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.