ADVERTISEMENT

ಮಹದಾಯಿ: ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:55 IST
Last Updated 25 ಜನವರಿ 2018, 19:55 IST
ಕನ್ನಡ ಸಂಘಟನೆಗಳ ಕಾರ್ಯಕರ್ತರು ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು
ಕನ್ನಡ ಸಂಘಟನೆಗಳ ಕಾರ್ಯಕರ್ತರು ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸಾಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಕನ್ನಡದ ಬಾವುಟ
ಗಳನ್ನು ಹಿಡಿದಿದ್ದ ಅವರು ‘ಮಹದಾಯಿ ನಮ್ಮದು’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಪ‍್ರತಿಕೃತಿ ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ರಸ್ತೆಯಲ್ಲೇ ಉರುಳು ಸೇವೆ ಮಾಡಿದರು.

ADVERTISEMENT

‘ಮಹದಾಯಿ ವಿವಾದವನ್ನು ಶೀಘ್ರವಾಗಿ ಪ್ರಧಾನಿ ಬಗೆಹರಿಸಬೇಕು. ಈ ಸಂಬಂಧ ನ್ಯಾಯ ಸಿಗುವವರೆಗೆ, ನನ್ನ ದೇಹದ ಕೊನೆ ಹನಿ ರಕ್ತ ಇರುವವರೆಗೆ ಹೋರಾಟ ಮಾಡುತ್ತೇನೆ’ ಎಂದು ವಾಟಾಳ್ ನಾಗರಾಜ್ ಹೇಳಿದರು.

ಭರವಸೆ ಸಿಕ್ಕರೆ ಬಂದ್ ಇಲ್ಲ: ‘ಫೆ.4ರೊಳಗೆ ವಿವಾದ ಇತ್ಯರ್ಥಪಡಿಸುವ ಭರವಸೆ ಸಿಕ್ಕರೆ ಬಂದ್ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ಬಂದ್ ನಿಶ್ಚಿತ. ರಾಜ್ಯ
ದೆಲ್ಲೆಡೆಯಿಂದ ಒಂದು ಲಕ್ಷ ಮಂದಿ ನಗರಕ್ಕೆ ಬರುತ್ತಾರೆ. ಅವರೆಲ್ಲರ ಜತೆಗೂಡಿ ಬಿಜೆಪಿ ಸಮಾವೇಶಕ್ಕೆ ನುಗ್ಗುತ್ತೇವೆ. ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶಿ
ಸುತ್ತೇವೆ’ ಎಂದು ತಿಳಿಸಿದರು.

‘ಪ್ರಧಾನಿ ಮೇಲೆ ಒತ್ತಡ ಹಾಕದಿದ್ದರೆ ರಾಜ್ಯದ ಸಂಸದರ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ. ಅವರನ್ನು ಗೃಹ ಬಂಧನದಲ್ಲಿರಿಸುತ್ತೇವೆ. ಸಮಸ್ಯೆ ಬಗೆಹರಿಸಲು ಅವರು ಕೂಡಲೇ ಮುಂದಾಗಬೇಕು. ಇಲ್ಲವಾದರೆ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

ನೆಲ, ಜಲ ವಿಚಾರದಲ್ಲಿ ಒಂದಾಗಬೇಕು: ‘ರಾಜ್ಯದ ನೆಲ, ಜಲದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕೆಂದೇ ಬಂದ್‌ಗೆ ಬೆಂಬಲ ಕೊಟ್ಟಿದ್ದೇವೆ. ಸಮಸ್ಯೆ ಬಗೆಹರಿಯುವವರೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ‘ಪ್ರತಿಭಟನೆಯಲ್ಲಿ ಸಾಕಷ್ಟು ಕಲಾವಿದರೂ ಭಾಗಿಯಾಗಿದ್ದಾರೆ. ಜನ
ರಿಗೆ ನೀರು ಕೊಡಿಸಬೇಕು ಎಂಬುದೇ ನಮ್ಮೆಲ್ಲರ ಕೂಗು. ಈ ವಿಚಾರದಲ್ಲಿ ನಮ್ಮ ಹೋರಾಟ ನಿಲ್ಲದು’ ಎಂದರು.

‘ಕುಡಿಯುವ ಉದ್ದೇಶಕ್ಕೆ ನಾವು 7.56 ಟಿಎಂಸಿ ಅಡಿ ನೀರನ್ನು ಕೇಳಿದ್ದೇವೆ. ಅದನ್ನು ಕೊಡಿಸುವ ಅಧಿಕಾರ ಪ್ರಧಾನಿಗಿದೆ. ನೀರು ಕೊಡಿಸುವುದಾಗಿ ಫೆ.4ರಂದು ಅವರು ಅಧಿಕೃತವಾಗಿ ಘೋಷಣೆ ಮಾಡಬೇಕು’ ಎಂದು ಶಾಸಕ ಎನ್.ಎಚ್‌.ಕೋನರೆಡ್ಡಿ ತಿಳಿಸಿದರು.

ನರಗುಂದದ ರೈತ ಸೇನಾ ಸಮನ್ವಯ ಸಮಿತಿಯ ಸಂಚಾಲಕ ಶ್ರೀಶೈಲ್ ಮೇಟಿ, ‘ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದ ಬಳಸಿದ ಗೋವಾದ ಮಂತ್ರಿ ವಿನೋದ್ ಪಾಳ್ಯೇಕರ್ ಭಯೋತ್ಪಾದಕ. ಮಂತ್ರಿ ಸ್ಥಾನದಲ್ಲಿರಲು ನಾಲಾಯಕ್. ಕನ್ನಡಿಗರ ಬಗ್ಗೆ ಮಾತನಾಡುವ ನೈತಿಕತೆ ಅವನಿಗಿಲ್ಲ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.