ADVERTISEMENT

ನಿತ್ಯಾನಂದ ಸ್ವಾಮೀಜಿ ಆಶ್ರಮದ ಕಾರು ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST

ಬೆಂಗಳೂರು: ನೆಲಮಂಗಲ ಬಳಿಯ ಅಂಚೆಪಾಳ್ಯದಲ್ಲಿ ಶನಿವಾರ ಮಧ್ಯಾಹ್ನ ನಿತ್ಯಾನಂದ ಸ್ವಾಮೀಜಿ ಆಶ್ರಮದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸವಾರ ರಾಮಚಂದ್ರ ಹಾಗೂ ಹಿಂಬದಿ ಸವಾರ ಲಕ್ಷ್ಮಿಕಾಂತ್‌ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಕಾರು ಚಾಲಕ ನವೀನ್‌ನನ್ನು ಸ್ಥಳೀಯರೇ ಬೆನ್ನಟ್ಟಿ ಹಿಡಿದು ನೆಲಮಂಗಲ ಸಂಚಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ನಿರ್ಲಕ್ಷ್ಯ ಚಾಲನೆ ಆರೋಪದಡಿ ಆತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಸ್ವಾಮೀಜಿ ಶಿಷ್ಯೆ ರಂಜಿತಾ ಸೇರಿದಂತೆ ಐವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೊರಟಿದ್ದಾಗ  ಜಿಂದಾಲ್ ಸಮೀಪ ಈ ಘಟನೆ ನಡೆದಿದೆ. ಬೈಕ್‌ ಸವಾರರು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಚಾಲಕ ಕಾರು ಓಡಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಅದನ್ನು ನೋಡಿದ್ದ ಸ್ಥಳೀಯರು, ಬೈಕ್‌ನಲ್ಲಿ ಬೆನ್ನಟ್ಟಿ 8ನೇ ಮೈಲ್ ಬಳಿ ಕಾರು ತಡೆದು ನಿಲ್ಲಿಸಿದ್ದರು. ಚಾಲಕನನ್ನು ಹಿಡಿದು ಥಳಿಸಿದ್ದರು. ಅದೇ ವೇಳೆ ರಂಜಿತಾ, ಮತ್ತೊಂದು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಕಾರಿನ (ಕೆಎ 04 ಎಂಎಂ 4444) ಮೇಲೆ ‘ಬಿಡದಿ ಧ್ಯಾನಪೀಠ ಚಾರಿಟೇಬಲ್ ಟ್ರಸ್ಟ್' ಎಂಬ ಫಲಕವಿದೆ. ಅದನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.