ಬೆಂಗಳೂರು: ನಗರದಲ್ಲಿರುವ ತಮಿಳು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಸಂತ ಕವಿ ತಿರುವಳ್ಳುವರ್ ದಿನದ ಅಂಗವಾಗಿ ಭಾನುವಾರ ಹಲಸೂರಿನಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಬೆಂಗಳೂರಿನಲ್ಲಿ ಜಾಗ ನೀಡುವಂತೆ ತಮಿಳು ಸಂಘ ಮನವಿ ಸಲ್ಲಿಸಿದ್ದು, ಜಾಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಮತ್ತು ಚೆನ್ನೈನಲ್ಲಿ ತಿರುವಳ್ಳುವರ್ ಪ್ರತಿಮೆ ಇದೆ. ಈ ಪ್ರತಿಮೆ ತಮಿಳುನಾಡು ಮತ್ತು ಕರ್ನಾಟಕದ ಬಾಂಧವ್ಯ ಬೆಸೆದಿದೆ ಎಂದ ಮುಖ್ಯಮಂತ್ರಿ, ಭಾಷೆ ಮನುಷ್ಯನ ಅಭಿವ್ಯಕ್ತಿ ಸಾಧನ. ಅದು ಭಾವನೆಗಳನ್ನು ಕೆರಳಿಸಬಾರದು. ಬಾಂಧವ್ಯ ಬೆಸೆಯಬೇಕು. ರಾಜ್ಯದಲ್ಲಿರುವ ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡಿಗರ ಜೊತೆಗೆ ಉತ್ತಮ ಬಾಂಧವ್ಯದಿಂದ ಇದ್ದಾರೆ’ ಎಂದರು.
‘ಮುಖ್ಯಮಂತ್ರಿಯಾದ ಬಳಿಕ ಪ್ರತಿವರ್ಷ ಇಲ್ಲಿಗೆ ಬಂದು ತಿರುವಳ್ಳುವರ್ ಪ್ರತಿಮೆಗೆ ಗೌರವ ಸಲ್ಲಿಸುತ್ತಿದ್ದೇನೆ. ಒಂಬತ್ತು ವರ್ಷಗಳ ಹಿಂದೆ ಪ್ರತಿಮೆ ಅನಾವರಣ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗಿ ಬಂದಿದ್ದೆ’ ಎಂದೂ ಅವರು ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.