ಬೆಂಗಳೂರು: ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ 10ನೇ ರಾಷ್ಟ್ರೀಯ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದಲ್ಲಿ ಸೋಮವಾರ ನಡೆಯಿತು.
ಜಾರ್ಖಂಡ್ ಹಾಗೂ ಛತ್ತೀಸಗಡದ ಬುಡಕಟ್ಟು ಸಮುದಾಯದ 220 ಯುವಜನರು ಭಾಗವಹಿಸಿದ್ದರು. 7 ದಿನಗಳ ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳು ಜರುಗಿದವು. ‘ಇಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಚೆನ್ನಾಗಿ ಹೇಳಿಕೊಟ್ಟರು. ಅದರಿಂದ ಸಾಕಷ್ಟು ಅನುಕೂಲ ಆಗಿದೆ. ಅದನ್ನು ಕಲಿತ ಖುಷಿಯೊಂದಿಗೆ ನಮ್ಮ ರಾಜ್ಯಕ್ಕೆ ಮರಳುತ್ತಿದ್ದೇನೆ’ ಎಂದು ಜಾರ್ಖಂಡ್ನ ಯುವತಿ ಉಷಾ ತಿಳಿಸಿದರು.
‘ಹಸಿರಿನಿಂದ ಕೂಡಿದ ಬೆಂಗಳೂರು ನಗರ ನೋಡಿದ ಖುಷಿ ಇದೆ. ಇಲ್ಲಿನ ಸಂಸ್ಕೃತಿ ಬಹಳ ಹಿಡಿಸಿತು. ಆದರೆ, ವಿಧಾನಸಭೆಯ ಅಧಿವೇಶನ ನೋಡಲು ಸಾಧ್ಯವಾಗಲಿಲ್ಲ ಎಂಬ ಬೇಸರ ಇದೆ’ ಜಾರ್ಖಂಡ್ನ ಈಶ್ವಾ ಹೇಳಿದರು.
‘ಜೀವನ ನಿರ್ವಹಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಫುಟ್ಬಾಲ್ ಆಟ ನೋಡಿ ಸಂಭ್ರಮಿಸಿದ್ದನ್ನು ಎಂದೂ ಮರೆಯಲಾರೆ’ ಎಂದು ಪ್ರಮೋದ್ ಕುಮಾರ್ ತಿಳಿಸಿದರು.
ಅಥ್ಲೀಟ್ ಅರ್ಜುನ್ ದೇವಯ್ಯ ತೀತಮಾಡ ಮಾತನಾಡಿ, ‘ಯುವಜನರು ಯೋಚನೆಗಳನ್ನು ಅನುಷ್ಠಾನಗೊಳಿಸಬೇಕು. ಸಮಯ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.