ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿ 2005ರಲ್ಲಿ ಸಂಭವಿಸಿದ್ದ ಭಯೋತ್ಪಾದನಾ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ನಾಲ್ವರಿಗೆ ಜಾಮೀನು ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಅವರು ಸಲ್ಲಿಸಿರುವ ಮೇಲ್ಮ
ನವಿಯ ವಿಚಾರಣೆಗೆ ಸಮ್ಮತಿ ಸೂಚಿಸಿದೆ.
ತಮಗೆ ನೀಡಲಾದ ಶಿಕ್ಷೆಯನ್ನು ಪ್ರಶ್ನಿಸಿ ನಾಲ್ವರೂ ಅಪರಾಧಿಗಳು ಸಲ್ಲಿಸಿರುವ ಅರ್ಜಿಯನ್ನು ಅರ್ಹತೆಗೆ ಅನುಗುಣವಾಗಿ ವಿಚಾರಣೆಗೆ ಒಳಪಡಿಸಲು ನ್ಯಾಯಮೂರ್ತಿ ಎಸ್.ಎ. ಬೋಬಡೆ ನೇತೃತ್ವದ ಪೀಠ ಮಂಗಳವಾರ ಸಮ್ಮತಿ ಸೂಚಿಸಿತು.ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗಳು ವರದಿ ಸಲ್ಲಿಸಿದ್ದು, ವರದಿಯಲ್ಲಿ ಇರುವ ಅಂಶಗಳು ಅರ್ಜಿದಾರರಿಗೆ ಪ್ರೋತ್ಸಾಹದಾಯಕವಾಗಿಲ್ಲ. ಹಾಗಾಗಿ ಮೇಲ್ಮನವಿಯ ವಿಚಾರಣೆಯು ಕೇವಲ ಶಿಕ್ಷೆಗೆ ಸಂಬಂಧಿಸಿದ ವಿಷಯಕ್ಕೆ ಮಾತ್ರ ಸೀಮಿತವಾಗಿರಲಿದೆ ಎಂದೂ ಪೀಠ ತಿಳಿಸಿತು.
ಪ್ರಕರಣ ಕುರಿತಂತೆ ಅಧೀನ ನ್ಯಾಯಾಲಯವು ನಾಲ್ವರೂ ಆರೋಪಿಗಳಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿ 2011ರಲ್ಲಿ ಆದೇಶ ನೀಡಿತ್ತು. ಆದರೆ, ಈ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್, ದೇಶಕ್ಕೆ ಗಂಡಾಂತರ ಎಸಗುವ ಪಿತೂರಿ ನಡೆಸಲಾಗಿದೆ ಎಂದು ಪರಿಗಣಿಸಿ ಆ ಶಿಕ್ಷೆಯನ್ನು ಜೀವಾವಧಿಗೆ ಹೆಚ್ಚಿಸಿ 2016ರಲ್ಲಿ ಆದೇಶ ನೀಡಿದೆ.
ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ 2016ರ ಅಕ್ಟೋಬರ್ 21ರಂದು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತಲ್ಲದೆ, ವರದಿ ಸಲ್ಲಿಸುವಂತೆ ಎನ್ಐಎಗೂ ಸೂಚಿಸಿತ್ತು. ಮಹಮ್ಮದ್ ರಾಜುರ್ ರೆಹಮಾನ್ ಅಲಿಯಾಸ್ ಉಮೇಶ, ಅಫ್ಸರ್ ಪಾಶಾ ಅಲಿಯಾಸ್ ಬಶೀರುದ್ದಿನ್, ಮೊಹಮ್ಮದ್ ಇರ್ಫಾನ್ ಹಾಗೂ ಚಿ ನಜ್ಮುದ್ದಿನ್ ಅಲಿಯಾಸ್ ಮುನ್ನಾ ಅವರೇ ಪ್ರಕರಣದಲ್ಲಿ ಶಿಕ್ಷಿತರಾಗಿದ್ದು, ಎಲ್ಲರೂ ಲಷ್ಕರ್– ಎ– ತಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.