ADVERTISEMENT

ಟ್ರಕ್ ಅಪಘಾತ; ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಟ್ರಕ್ ಅಪಘಾತ; ಚಾಲಕ ಸಾವು
ಟ್ರಕ್ ಅಪಘಾತ; ಚಾಲಕ ಸಾವು   

ಬೆಂಗಳೂರು:‌ ಮೈಸೂರು ರಸ್ತೆಯ ದುಬಾಸಿಪಾಳ್ಯ ಜಂಕ್ಷನ್‌ನಲ್ಲಿ ಬುಧವಾರ ಬೆಳಿಗ್ಗೆ ಮೆಟ್ರೊ ಪಿಲ್ಲರ್‌ಗೆ ಟ್ರಕ್ ಡಿಕ್ಕಿಯಾಗಿ ಚಾಲಕ ಶಿವಯ್ಯ (28) ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಶಿವಯ್ಯ, ಎಂಟು ವರ್ಷಗಳಿಂದ ನಗರದಲ್ಲಿ ಟ್ರಕ್ ಚಾಲಕರಾಗಿದ್ದಾರೆ. ಮಂಗಳವಾರ ರಾತ್ರಿ ಕಡಪದಿಂದ ಸಿಮೆಂಟ್ ತುಂಬಿಕೊಂಡು ಬಂದಿದ್ದ ಅವರು, ನಗರದಲ್ಲಿ ಸ್ವಲ್ಪ ಮಾಲನ್ನು ಇಳಿಸಿ ಉಳಿದಿದ್ದನ್ನು ಮೈಸೂರಿಗೆ ಸಾಗಿಸುತ್ತಿದ್ದರು.

ಬೆಳಿಗ್ಗೆ 4.45ರ ಸುಮಾರಿಗೆ ದುಬಾಸಿಪಾಳ್ಯ ಜಂಕ್ಷನ್‌ ಬಳಿ ಸಾಗುತ್ತಿದ್ದಾಗ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ವೇಗವಾಗಿ ಸಾಗಿದ ಟ್ರಕ್, ‘ಐರಾವತ’ ಹೋಟೆಲ್ ಮುಂಭಾಗದಲ್ಲಿರುವ ಮೆಟ್ರೊ ಪಿಲ್ಲರ್‌ಗೆ ಡಿಕ್ಕಿಯಾಗಿದೆ. ಗುದ್ದಿದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶಿವಯ್ಯ ಅವರ ದೇಹ ಅಪ್ಪಚ್ಚಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಇತರೆ ವಾಹನ ಸವಾರರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಕೆಂಗೇರಿ ಸಂಚಾರ ಪೊಲೀಸರು, ಮೆಟ್ರೊ ಕಾಮಗಾರಿಗೆ ಬಳಸುತ್ತಿದ್ದ ಕ್ರೇನ್‌ನಿಂದ ಬೆಳಿಗ್ಗೆ 8.30ರ ಸುಮಾರಿಗೆ ಟ್ರಕ್ ತೆರವುಗೊಳಿಸಿದರು. ಅವಘಡದಿಂದಾಗಿ ಆ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಪಾದಚಾರಿ ಸಾವು: ಬಳ್ಳಾರಿ ರಸ್ತೆಯ ಹುಣಸಮಾರನಹಳ್ಳಿಯಲ್ಲಿ ಮಂಗಳವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಶಿವಯ್ಯ (65) ಎಂಬುವರು ಮೃತಪಟ್ಟಿದ್ದಾರೆ.

ಯಲಹಂಕ ನಿವಾಸಿಯಾದ ಅವರು, ಹುಣಸಮಾರನಹಳ್ಳಿಯ ಟೊಯೊಟಾ ಶೋರೂಂನಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದರು. ಮಂಗಳವಾರ ರಾತ್ರಿ ಪಾಳಿ ಕೆಲಸ ಇದ್ದುದರಿಂದ, 7.30ರ ಸುಮಾರಿಗೆ ಬಸ್‌ನಲ್ಲಿ ಬಂದು ಎಂವಿಐಟಿ ಕಾಲೇಜು ನಿಲ್ದಾಣದಲ್ಲಿ ಇಳಿದಿದ್ದರು. ಶೋ ರೂಂಗೆ ಹೋಗಲು ರಸ್ತೆ ದಾಟಲು ಮುಂದಾದಾಗ, ಕೆಐಎಎಲ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.