ಬೆಂಗಳೂರು: ಇಂಡೋ-ಜಪಾನ್ ಹಬ್ಬ ನಗರದ ಜೆ.ಎನ್.ಟಾಟಾ ಸಭಾಂಗಣದಲ್ಲಿ ಇದೇ 3ರಂದು ಬೆಳಿಗ್ಗೆ 9ರಿಂದ ನಡೆಯಲಿದೆ ಎಂದು ಜಪಾನೀಸ್ ಅಸೋಸಿಯೇಷನ್ ಅಧ್ಯಕ್ಷ ಅಕಿನೊರಿ ಉರುಕವಾ ತಿಳಿಸಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಪಾನ್ನ ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ಧತಿಯನ್ನು ಇಲ್ಲಿನ ನಾಗರಿಕರಿಗೆ ಪರಿಚಯಿಸಲಾಗುತ್ತದೆ. ಈ ಹಬ್ಬ ಎರಡೂ ದೇಶಗಳ ಸಂಬಂಧದ ಪ್ರತೀಕವಾಗಿದೆ’ ಎಂದರು.
ಜಪಾನಿ ದೇಶಭಕ್ತಿಗೀತೆ ಗಾಯನ, ಬಾಲಿವುಡ್ ಸಿನಿಮಾ ಗೀತೆಗಳಿಗೆ ನೃತ್ಯ ಹಾಗೂ ಕನ್ನಡ ಹಾಡುಗಳ ಗಾಯನ ಇರಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು 3,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ರಜತ ಸಂಭ್ರಮ
ಬೆಂಗಳೂರು: ಬಂಟರ ಸಂಘದ ಮಹಿಳಾ ಘಟಕದ ರಜತ ಸಂಭ್ರಮ ಇದೇ 3ರಂದು ಸಂಜೆ 4.30ಕ್ಕೆ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಿ. ಚಂದ್ರಹಾಸ ರೈ ತಿಳಿಸಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ನಾಲ್ಕು ಕುಟುಂಬಗಳ ಯುವತಿಯರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲಾಗುವುದು’ ಎಂದರು.
ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಮಾತನಾಡಿ, ಮಹಿಳೆಯರು ತಯಾರಿಸಿದ ಗೃಹೋಪಯೋಗಿ ವಸ್ತುಗಳು, ವಿವಿಧ ತಿಂಡಿ ತಿನಿಸುಗಳು, ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ.
ಉದ್ಯೋಗ ಮೇಳ
ಬೆಂಗಳೂರು: ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ಕೌಶಲ ಮತ್ತು ಉದ್ಯೋಗ ಮೇಳ ಜಯನಗರದ ಚಂದ್ರ ಗುಪ್ತ ಆಟದ ಮೈದಾನದಲ್ಲಿ ಶುಕ್ರವಾರ ನಡೆಯಿತು. ಸ್ಥಳದಲ್ಲಿಯೇ 274 ಮಂದಿಗೆ ನೇಮಕಾತಿ ಆದೇಶ ನೀಡಲಾಯಿತು.
ಮೇಳ ಉದ್ಘಾಟಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ‘ಕೌಶಲ ಹೊಂದಿರುವವರನ್ನು ಗುರುತಿಸಿ ಅವರಿಗೆ ಸೂಕ್ತ ಉದ್ಯೋಗ ಒದಗಿಸಲು ನಮ್ಮ ಸರ್ಕಾರ ಬದ್ಧ’ ಎಂದರು.
ಮೇಯರ್ ಆರ್. ಸಂಪತ್ರಾಜ್, ಜೀವನದ ದಿಕ್ಕನ್ನು ಬದಲಿಸಲು ಇಂತಹ ಮೇಳಗಳು ಅಗತ್ಯ ಎಂದರು. ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ ಮಾತನಾಡಿ, ‘ನಿಗಮ ಮುಂದಿನ ದಿನಗಳಲ್ಲೂ ಇಂತಹ ಮೇಳ ಸಂಘಟಿಸಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.