ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಕೋಟೆ–ಕೊತ್ತಲ, ಅರಮನೆಗಳ ಇತಿಹಾಸ ಸಾರುವ ಛಾಯಾಚಿತ್ರಗಳ ಗುಚ್ಛವನ್ನು ಒಳಗೊಂಡ ‘ಕರುನಾಡ ಕೋಟೆಗಳ ಸುವರ್ಣ ನೋಟ’ ಪುಸ್ತಕ ಶುಕ್ರವಾರ ಬಿಡುಗಡೆಗೊಂಡಿತು.
‘ಪ್ರಜಾವಾಣಿ’ಯ ನಿವೃತ್ತ ಮುಖ್ಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕ್ಲಿಕ್ಕಿಸಿದ್ದ ಚಿತ್ರಗಳನ್ನು ಅಭಿಮಾನಿ ಪ್ರಕಾಶನ ಅಂದವಾಗಿ ಪುಸ್ತಕದಲ್ಲಿ ಮುದ್ರಿಸಿಕೊಟ್ಟಿದೆ.
ಬೀದರ್, ಬಸವಕಲ್ಯಾಣ, ಭಾಲ್ಕಿ, ಕಲಬುರ್ಗಿ, ಮಳಖೇಡ, ಯಾದಗಿರಿ, ಸುರಪುರ, ವೆಂಕಟಪ್ಪನಾಯಕನ ಅರಮನೆ, ವನದುರ್ಗ, ವಿಜಯಪುರ, ಬಾಗಲಕೋಟೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೆಳಗಾವಿ, ಕಿತ್ತೂರು ಅರಮನೆ, ಸವದತ್ತಿ, ರಾಜಹಂಸಘಡ, ರಾಮದುರ್ಗ ಅರಮನೆ... ಹೀಗೆ ನೂರಕ್ಕೂ ಹೆಚ್ಚು ಕೋಟೆಗಳ ನೋಟವನ್ನು ಈ ಪುಸ್ತಕದಲ್ಲಿ ಕಾಣಬಹುದು.
ಛಾಯಾಚಿತ್ರಗಳ ಜೊತೆಗೆ ಪೂರಕವಾದ ಮಾಹಿತಿಯನ್ನು ಒಳಗೊಂಡಿದೆ. ಕೋಟೆಯ ವಿಸ್ತಾರ, ಆಳ್ವಿಕೆ ನಡೆಸಿದ ರಾಜಮನೆತನ, ಕೋಟೆಯ ವೈಶಿಷ್ಟ್ಯಗಳ ಬಗ್ಗೆ ಗೋವರ್ಧನ್ ಅವರು ಚಿಕ್ಕದಾಗಿ ಟಿಪ್ಪಣಿಗಳನ್ನು ನೀಡಿದ್ದಾರೆ.
‘ಕೋಟೆಗಳ ಬಗ್ಗೆ ನನಗೂ ಒಲವಿದೆ. ತಂತ್ರಜ್ಞಾನವಿಲ್ಲದ ಕಾಲದಲ್ಲಿ ಅವುಗಳನ್ನು ಕಟ್ಟಿದ ರೀತಿ ಚಿಂತನೆಗೆ ಹಚ್ಚುತ್ತದೆ. ರಾಜಪ್ರಭುತ್ವದ ಆಳ್ವಿಕೆ ಬಗ್ಗೆ ಆಸಕ್ತಿ ಇಲ್ಲ’ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ತಿಳಿಸಿದರು.
‘ಕರ್ನಾಟಕದ ಚರಿತ್ರೆಯ ಬಹುತ್ವದ ಪರಿಚಯ ಈ ಪುಸ್ತಕದಿಂದ ಆಗುತ್ತದೆ. ಸರ್ಕಾರ ಈ ಪುಸ್ತಕವನ್ನು ಖರೀದಿಸಿ, ಎಲ್ಲಾ ಸರ್ಕಾರಿ ಶಾಲೆಗಳಿಗೂ ವಿತರಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕದ ಬೆಲೆ ₹4,500
ಪುಟಗಳು 372
100ಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.