ADVERTISEMENT

ಬಿಜೆಪಿ ಅಧಿಕಾರದ ಅವಧಿಯಲ್ಲೇ ಅಪರಾಧಗಳು ಹೆಚ್ಚು: ರಾಮಲಿಂಗಾರೆಡ್ಡಿ

ಕಾಡುಗೊಂಡನಹಳ್ಳಿ ಠಾಣೆಯ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 4:38 IST
Last Updated 4 ಫೆಬ್ರುವರಿ 2018, 4:38 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ‘ಬಿಜೆಪಿ ಅಧಿಕಾರದ ಅವಧಿಯಲ್ಲೇ ಅಪರಾಧಗಳು ಹೆಚ್ಚಾಗಿದ್ದವು. ಅಪರಾಧಗಳ ಅಂಕಿ-ಅಂಶ ತಿಳಿದುಕೊಳ್ಳದ ಆ ಪ್ರಕ್ಷದ ಮುಖಂಡರು, ಕಾನೂನು ಸುವ್ಯವಸ್ಥೆ ಬಗ್ಗೆ ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕಾಡುಗೊಂಡನಹಳ್ಳಿ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಯಿಗೆ ಬಂದಂತೆ ಮಾತನಾಡಿ ಕೋಮು ಗಲಭೆ ಉಂಟು ಮಾಡಲು ಯತ್ನಿಸುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್‌.ಸುರೇಶ್ ಕುಮಾರ್‌ ಅವರ ಬಾಯಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ  ಯಡಿಯೂರಪ್ಪ ಬೀಗ ಹಾಕಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಅವರೆಲ್ಲರಿಗೂ ಸೂಚಿಸಬೇಕು’ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ADVERTISEMENT

**
ಹೋಮ ಮಾಡಿದ್ದಕ್ಕೆ ವಿರೋಧ

ಉದ್ಘಾಟನೆ ಪ್ರಯುಕ್ತ ನೂತನ ಕಟ್ಟಡದಲ್ಲಿ ಹೋಮ ಮಾಡಲಾಗಿದೆ. ಕೆಲ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ವೇಳೆಯಲ್ಲೇ ಸಚಿವ ರಾಮಲಿಂಗಾರೆಡ್ಡಿ ಎದುರು ಅಸಮಾಧಾನ ತೋಡಿಕೊಂಡರು.

‘ಮೂಢನಂಬಿಕೆ ನಿಷೇಧಿಸಲು ಸರ್ಕಾರವೇ ಸಾಕಷ್ಟು ಕ್ರಮ ಕೈಗೊಂಡಿದೆ. ಇಲ್ಲಿ ಹೋಮ ಮಾಡಲಾಗುತ್ತಿದೆ. ಪೊಲೀಸರೇ ಮೂಢನಂಬಿಕೆಯನ್ನು ಪೋಷಿಸುತ್ತಿದ್ದಾರೆ‍’ ಎಂದು ಸ್ಥಳೀಯರು ದೂರಿದರು.

‘ಮನೆಯ ಗೃಹ ಪ್ರವೇಶದಲ್ಲಿ ಹೋಮ ಮಾಡಿಕೊಂಡರೆ ನಮ್ಮದೇನು ಅಭ್ಯಂತರವಿಲ್ಲ. ಎಲ್ಲ ಧರ್ಮ, ಜಾತಿಯ ಜನರು ಬಂದು ಹೋಗುವ, ಅವರಿಗೆ ನ್ಯಾಯ ಕೊಡಿಸುವ ಠಾಣೆಯಲ್ಲಿ ಹೋಮ ಮಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.