ADVERTISEMENT

ಬೈಕ್‌ ಗುದ್ದಿ ಮಗು ಸಾವು ಸವಾರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:18 IST
Last Updated 7 ಫೆಬ್ರುವರಿ 2018, 20:18 IST

ಬೆಂಗಳೂರು: ಬೈಕ್ ಗುದ್ದಿಸಿ 10 ತಿಂಗಳ ಮಗುವಿನ ಸಾವಿಗೆ ಕಾರಣನಾಗಿದ್ದ ಆರೋಪದಡಿ ಸವಾರ ನಟರಾಜು (33) ಎಂಬಾತನನ್ನು ಅಪಘಾತ ನಡೆದ 13 ದಿನಗಳ ಬಳಿಕ ಎಚ್‌ಎಎಲ್ ಏರ್‌ಪೋರ್ಟ್‌ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಸವನಹಳ್ಳಿಯ ಕೊಳೆಗೇರಿ ಪ್ರದೇಶದ ನಿವಾಸಿಯಾಗಿದ್ದ ಆರೋಪಿ, ಸ್ನೇಹಿತನ ಜತೆ ಜ.25ರಂದು ಬೈಕ್‌ನಲ್ಲಿ ಹೊಗುತ್ತಿದ್ದರು. ಮಾರತ್ತಹಳ್ಳಿ ಸಮೀಪದ ವಿಮ್ಸ್‌ ಆಸ್ಪತ್ರೆ ಬಳಿ ರಸ್ತೆ ದಾಟುತ್ತಿದ್ದ ರೂಪಶ್ರೀ (30) ಹಾಗೂ ಅವರ ಮಗ ಸೆಹಾನ್ ಸ್ವೇನ್‌ಗೆ ಬೈಕ್ ಗುದ್ದಿಸಿದ್ದರು. ಅವರಿಬ್ಬರು
ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದ.

ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೂಪಶ್ರೀ ಹಾಗೂ ಸೆಹಾನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜ.31ರಂದು ಮಗ ಮೃತಪಟ್ಟಿದ್ದ. ಆ ಬಳಿಕ ತಾಯಿ ಠಾಣೆಗೆ ದೂರು ಕೊಟ್ಟಿದ್ದರು.

ADVERTISEMENT

13 ಸಿಮ್ ಕಾರ್ಡ್‌ ಬದಲಿಸಿದ್ದ: ಆರೋಪಿ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹಿಂಬದಿ ಸವಾರ ಮಹೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಆತನ ಮಾಹಿತಿ ಆಧರಿಸಿ ಕಸವನಹಳ್ಳಿಯ ಕೊಳೆಗೇರಿ ಪ್ರದೇಶದಲ್ಲಿದ್ದ ಆರೋಪಿ ಮನೆಗೆ ಹೋದಾಗ ಆತ ಅಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಅಪಘಾತದ ಬಳಿಕ ಆರೋಪಿ ತಲೆಮರೆಸಿಕೊಂಡು ಊರೂರು
ಸುತ್ತಾಡುತ್ತಿದ್ದ. ಆ ಅವಧಿಯಲ್ಲಿ ಆತ 13 ಸಿಮ್‌ ಕಾರ್ಡ್‌ಗಳನ್ನು ಬದಲಿಸಿದ್ದ. ಆದರೆ, ಮೊಬೈಲ್‌ ಒಂದೇ ಇತ್ತು. ಅದರ ಐಎಂಇಐ ಸಂಖ್ಯೆಯ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಆತ
ದಾವಣಗೆರೆಯಲ್ಲಿ ಇದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.

‘ದಾವಣಗೆರೆಗೆ ಹೋದಾಗ ಆತ ಅಲ್ಲಿಂದಲೂ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ಈ ಬಗ್ಗೆ ತಿಳಿದು ಆತನನ್ನು ಬಂಧಿಸಿದೆವು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.