ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ದಾಖಲೆಗಳು ‘ಲಭ್ಯವಿಲ್ಲ’ ಎಂದು ಉತ್ತರಿಸಿದ ದೇವನಹಳ್ಳಿ ಉಪನೋಂದಣಾಧಿಕಾರಿ ಕಚೇರಿ ಎಂಟು ಸಿಬ್ಬಂದಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕ ದಾಖಲೆಗಳು ಲಭ್ಯವಿಲ್ಲವೆಂದು ಸರ್ಕಾರಿ ಅಧಿಕಾರಿಗಳು ಉತ್ತರ ನೀಡಿರುವ ಬಗ್ಗೆ ದೂರುಗಳು ಬಂದರೆ ಎಫ್ಐಆರ್ ದಾಖಲಿಸುವಂತೆ ಕರ್ನಾಟಕ ಮಾಹಿತಿ ಆಯೋಗ ಇತ್ತೀಚೆಗೆ ನೀಡಿದ್ದ ಆದೇಶ ಆಧರಿಸಿ ಈ ಎಫ್ಐಆರ್ ದಾಖಲಿಸಲಾಗಿದೆ.
ಎಸ್. ಆರ್. ವಸಂತಕುಮಾರ್(ನಿವೃತ್ತ ಹಿರಿಯ ಉಪನೋಂದಣಾಧಿಕಾರಿ), ಇಮ್ತಿಯಾಜ್ ಆಹ್ಮದ್ (ಹಿರಿಯ ಉಪನೋಂದಣಾಧಿಕಾರಿ), ಕೆ.ಎಂ. ನಾಗಭೂಷಣ್(ಉಪನೋಂದಣಾಧಿಕಾರಿ), ಸಿದ್ದರಾಮೇಗೌಡ (ಎಫ್ಡಿಎ), ರಾಗೀಂದ್ರಪ್ಪ ಮತ್ತು ಕಮಲಾಕ್ಷಿ (ಇಬ್ಬರೂ ಎಸ್ಡಿಎ), ಡಿ.ಆರ್. ನರಸಿಂಹಯ್ಯ (ನಿವೃತ್ತ ಸಹಾಯಕ) ಮತ್ತು ಕೆ.ಕೆ. ಮ್ಯಾಥ್ಯೂ (ಡಿ ಗ್ರೂಪ್ ನೌಕರ) ವಿರುದ್ಧ ಪ್ರಕರಣ ದಾಖಲಾಗಿದೆ.
ಸೊಣ್ಣಪ್ಪನಹಳ್ಳಿ ಗ್ರಾಮದ ಜಮೀನೊಂದರ ಕ್ರಯಪತ್ರದ ನಕಲು, ನೋಂದಣಿ ವೇಳೆ ಪಡೆದ ಹೆಬ್ಬೆಟ್ಟಿನ ಗುರುತಿನ ನಕಲು, ನೋಂದಣಿಗೆ ಪಡೆದಿರುವ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಎನ್. ಶಿವಕುಮಾರ್ ಎಂಬುವರು ಉಪನೋಂದಣಾಧಿಕಾರಿ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ದಾಖಲೆಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ಹಿಂಬರಹ ನೀಡಿದ್ದರು. ಬಳಿಕ ಶಿವಕುಮಾರ್ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.