ಬೆಂಗಳೂರು: ನಬಾರ್ಡ್ ಸಂಸ್ಥೆಯು ದೇಶದಾದ್ಯಂತ ಈ ವರ್ಷ ₹9.5 ಲಕ್ಷ ಕೋಟಿ ಕೃಷಿ ಸಾಲ ನೀಡಿದೆ. ಆದರೆ, ಅದಕ್ಕೆ ತಕ್ಕಂತೆ ಕೃಷಿ ಉತ್ಪಾದನೆಯಾಗಿಲ್ಲ ಎಂದು ನಬಾರ್ಡ್ ಸಂಸ್ಥೆಯ ಮುಖ್ಯ ಮಹಾ ಪ್ರಬಂಧಕ ಡಾ.ಎಂ.ಐ.ಗಾಣಿಗ ಬೇಸರ ವ್ಯಕ್ತಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರೈತ ತರಬೇತಿ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
2003–04ರಲ್ಲಿ ಎಲ್ಲ ಹಣಕಾಸು ಸಂಸ್ಥೆಗಳಿಂದ ರೈತರಿಗೆ ₹80 ಸಾವಿರ ಕೋಟಿ ಸಾಲ ಸೌಲಭ್ಯ ನೀಡಲಾಗಿತ್ತು. ಈಗ ಇಷ್ಟೇ ಮೊತ್ತದ ಹಣವನ್ನು ಕರ್ನಾಟಕದ ರಾಜ್ಯದ ರೈತರಿಗೆ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆದು ಕೃಷಿ ಉತ್ಪಾದನೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಆಯುಕ್ತ ಡಾ.ಜಿ.ಸತೀಶ್, ‘ಬೆಳೆ ಪದ್ಧತಿಯಲ್ಲಿ ಸಮಗ್ರ ಬದಲಾವಣೆಯಾಗಿದೆ. ಈ ಬಗ್ಗೆ ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗುತ್ತಿದೆ’ ಎಂದರು.
ಆನೇಕಲ್ ತಾಲ್ಲೂಕಿನ ಚಂದಾಪುರದ ಪ್ರಗತಿಪರ ರೈತ ಮಹಿಳೆ ಅಶ್ವಥಮ್ಮ ನಾರಾಯಣರೆಡ್ಡಿ, ‘ನಾನು ರೈತ ತರಬೇತಿ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ತರಬೇತಿ ಪಡೆದಿದ್ದೇನೆ. ರಾಗಿ ಮಾಲ್ಟ್ ಹಾಗೂ ರಾಗಿ ಹಪ್ಪಳವನ್ನು ವಿದೇಶಗಳಿಗೆ ರಫ್ತು ಮಾಡಲು ಸಂಸ್ಥೆ ಕಾರಣ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.