ADVERTISEMENT

ವಕ್ಫ್‌ ಆಸ್ತಿ ರಕ್ಷಣೆಗೆ ಸರ್ಕಾರದ ಹಿಂದೇಟು: ಆರೋಪ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:29 IST
Last Updated 10 ಫೆಬ್ರುವರಿ 2018, 19:29 IST

ಬೆಂಗಳೂರು: ಕಾಣದ ಕೈಗಳ ಕರಾಮತ್ತಿಗೆ ಮಣಿದ ರಾಜ್ಯ ಸರ್ಕಾರ ವಕ್ಫ್‌ ಆಸ್ತಿ ರಕ್ಷಣೆಗೆ ಹಿಂದೇಟು ಹಾಕುತ್ತಿದೆ ಎಂದು ಮುಸ್ಲಿಮರ(ವಕ್ಫ್‌) ಭ್ರಷ್ಟಾಚಾರ ಮುಕ್ತಿ ಮಹಾಸಭಾದ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ 54,000 ಎಕರೆ ವಕ್ಫ್ ಆಸ್ತಿಯಿದ್ದು, ಅಂದಾಜು 30,000 ಎಕರೆಯನ್ನು ಬಲಾಢ್ಯರು, ರಾಜಕಾರಣಿಗಳು ಕಬಳಿಸಿದ್ದಾರೆ. ಈ ಆಸ್ತಿಯ ಮೌಲ್ಯ ₹15 ಲಕ್ಷ ಕೋಟಿಯಿಂದ ₹20 ಲಕ್ಷ ಕೋಟಿಯಷ್ಟಿದೆ. ಇದನ್ನು ಸ್ವಾಧೀನ ಪಡಿಸಿಕೊಂಡು, ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಯನ್ನು ರಕ್ಷಿಸಬೇಕಾದ ಸರ್ಕಾರ ಕೊಳ್ಳೆ ಹೊಡೆದಿರುವವರ ಪರವಾಗಿ ನಿಂತಿದೆ ಎಂದೂ ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವು ರಾಜ್ಯದ ಉದ್ದಗಲಕ್ಕೆ ಸಮೀಕ್ಷೆ ನಡೆಸಿ ಏಳು ಸಾವಿರ ಪುಟ
ಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ  ವರದಿಯನ್ನು ಹಿಂದಿನ ಸರ್ಕಾರ ಒಪ್ಪಿಕೊಂಡಿತ್ತು. ಆದರೆ, ಈಗಿನ ಸರ್ಕಾರ ವರದಿಯ
ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಮುಂದಾಗಿಲ್ಲ ಎಂದು ಅವರೂ ಟೀಕಿಸಿದ್ದಾರೆ.

ADVERTISEMENT

‘ಆಸ್ತಿ ರಕ್ಷಣೆಗೆ ಮುಂದಾಗದೇ ಇದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದೂ ಮಾಣಿಪ್ಪಾಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.