ಬೆಂಗಳೂರು: ‘ನಿರ್ಮಾಣ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರಿಗೆ ತೋರಿಕೆಗಾಗಿ ಮಾತ್ರ ಶೇ 24.10ರಷ್ಟು ಮೀಸಲಾತಿ ನೀಡಲಾಗಿದೆ.
ಸರಿಯಾದ ರೀತಿಯಲ್ಲಿ ಗುತ್ತಿಗೆ ಅವಕಾಶ ನೀಡಲು ಸರ್ಕಾರ ಕಾಯ್ದೆ ರೂಪಿಸಬೇಕು’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
‘ಗುತ್ತಿಗೆಯಲ್ಲಿ ₹50 ಲಕ್ಷದೊಳಗಿನ ಕಾಮಗಾರಿ ಮಾತ್ರ ನೀಡಬೇಕೆಂದು ಮಾನದಂಡ ನಿಗದಿಪಡಿಸಿರುವುದು ಬಹುದೊಡ್ಡ ದ್ರೋಹ. ಪ್ರಾಧಿಕಾರಗಳು ಹಾಗೂ ನಿಗಮ ಮಂಡಳಿಗಳಲ್ಲಿ ಅಧಿಕಾರಿಗಳು ₹50 ಲಕ್ಷದೊಳಗಿನ ಹಲವು ಕಾಮಗಾರಿಗಳನ್ನು ಒಟ್ಟುಗೂಡಿಸಿ ಕೋಟ್ಯಂತರ ಮೊತ್ತದ ಪ್ಯಾಕೇಜ್ ಮಾಡಿ, ಸಣ್ಣಪುಟ್ಟ ಗುತ್ತಿಗೆದಾರರಿಗೆ ವಂಚನೆ ಮಾಡುತ್ತಿದ್ದಾರೆ’ ಎಂದು ಸಂಘದ ರಾಜ್ಯ ಅಧ್ಯಕ್ಷ ಎಲ್.ಕೆ.ಅರಸು ಆರೋಪಿಸಿದ್ದಾರೆ.
ಸಂವಿಧಾನಬದ್ಧವಾಗಿ ಸಮಪಾಲು ಗುತ್ತಿಗೆ ಹಂಚಿಕೆ ಮಾಡಲು ₹50 ಲಕ್ಷದ ಮಿತಿ ರದ್ದುಪಡಿಸಬೇಕು.
ಸೇವಾ ವಲಯ, ಸರಬರಾಜು, ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್, ಬಿಬಿಎಂಪಿ ಒಳಗೊಂಡಂತೆ ಎಲ್ಲ ನಗರ ಪ್ರದೇಶಗಳ ಕಸ ವಿಲೇವಾರಿ, ಸರ್ಕಾರಿ ಇಲಾಖೆಗಳಲ್ಲಿ ಅನುಪಯುಕ್ತ ವಸ್ತುಗಳ ಹರಾಜು, ಇಲಾಖೆಗಳಲ್ಲಿನ ಉಪಾಹಾರ ಗೃಹ ನಿರ್ವಹಣೆ, ಅಬಕಾರಿ ಮತ್ತು ಗಣಿಗಾರಿಕೆ ಪರವಾನಗಿ ನೀಡಿಕೆಯಲ್ಲೂ ಯಾವುದೇ ಮಿತಿ ಮತ್ತು ಷರತ್ತು ವಿಧಿಸದೆ ಶೇ 24.10ರಷ್ಟು ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.