
ದಾಬಸ್ ಪೇಟೆ: ಗುಣ ಸಂಪನ್ಮೂಲಗಳು ಒಂದೆಡೆ ಕಲೆತಾಗ ಸಂಸ್ಕಾರವುಂಟಾಗಿ ಕತ್ತಲೆ ದೂರವಾಗಿ ಸಾಮರಸ್ಯದ ಬದುಕು ಮೂಡುತ್ತದೆ ಎಂದು ಶಿವಗಂಗೆಯ ಮೇಲಣಗವಿ ಮಠಾಧೀಶ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಠದ ಆಶ್ರಯದಲ್ಲಿ ನಡೆದ 6ನೇ ಧರ್ಮಚಿಂತನ ಕನ್ನಡ ದೀಪೋತ್ಸವ, ಕವಿ ಸಮ್ಮೇಳನ ಮತ್ತು ರೇಣುಕಾಚಾರ್ಯರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಜ್ಞಾನವನ್ನು ತೊಡೆದು ಜ್ಞಾನದ ಬೆಳಕನ್ನು ಮಠವು ಸಾದರಪಡಿಸುತ್ತಾ ಬಂದಿದೆ. ಧರ್ಮ ಸಂದೇಶಗಳನ್ನು ದೇಶ, ವಿದೇಶಗಳಲ್ಲಿ ಸಾರಿ, ಭಕ್ತರನ್ನು ಸೆಳೆಯುವ ಮುಖೇನ ಮಠದ ಕಾರ್ಯತತ್ಪರತೆ ಹೆಚ್ಚಿಸುತ್ತಿರುವುದು ಸಮಾಜಕ್ಕೆ ಸಾರ್ಥಕತೆ ಬಿತ್ತರಿಸುತ್ತಿದೆ ಎಂದರು.
ಮಾಗಡಿಯ ಜಡೆದೇವರ ಮಠದ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ವಿ.ಮನೋಹರ್ ಹಾಜರಿದ್ದರು.
ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ಅವರು ಮಠದ ದಾಸೋಹ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ₹50 ಲಕ್ಷ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.
ಮಾಗಡಿ ಪುರಸಭಾಧ್ಯಕ್ಷೆ ಶಿವರುದ್ರಮ್ಮ ವಿಜಯ ಕುಮಾರ್ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎನ್.ಜಿ.ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕವಿಗಳು ಕವನ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.