ಬೆಂಗಳೂರು: ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ₹ 73 ಲಕ್ಷವನ್ನು ನೀಡಿ, ಮುಂದೆಯೂ ಸಹ ಎಫ್ಕೆಸಿಸಿಐ ಸದಾ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡುತ್ತದೆ ಎಂದು ಎಫ್ಕೆಸಿಸಿಐ ಭರವಸೆ ನೀಡಿದೆ.
ಲಾಕ್ಡೌನ್ ಸಡಿಲಿಕೆ ಕೈಗಾರಿಕೆ, ವ್ಯಾಪಾರ, ಸೇವಾ ಚಟುವಟಿಕೆಗಳ ಪ್ರಾರಂಭ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಕಾರ ಕುರಿತಂತೆ ರಾಜ್ಯದ ಸಂಘ-ಸಂಸ್ಥೆಗಳೊಡನೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಯಿತು.
ಈ ವೇಳೆ ಮಾತನಾಡಿದ ಜನಾರ್ದನ್, ಮೇ 4ರಿಂದ ಇಡೀ ರಾಜ್ಯದಲ್ಲಿ ಕೈಗಾರಿಕೆ, ಸೇವೆ, ವ್ಯಾಪಾರ ಚಟುವಟಿಕೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾರೆ. ಲಾಕ್ಡೌನ್ ಸಡಿಲಿಕೆ, ಸರ್ಕಾರದ ಪಾತ್ರ, ವಿದ್ಯುತ್, ಕಾರ್ಮಿಕರು, ಆಸ್ತಿ ತೆರಿಗೆ, ಕೋವಿಡ್ ಅಸಿಸ್ಟೆನ್ಸ್ ಫಂಡ್ ಸ್ಥಾಪನೆ. ಕೈಗಾರಿಕಾ ನೀತಿಯಲ್ಲಿ ಕೋವಿಡ್ ಪರಿಹಾರ ಸೇರಿದಂತೆ ಹಲವಾರು ವಿಷಯಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು. ಇದೇ ರೀತಿ ಇತರೆ ಸಂಘಗಳು ಸಹ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಧಾನಿಯವರ ಆದೇಶವನ್ನು ಎದುರು ನೋಡುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಬೆಂಗಳೂರು ಒಳಗೊಂಡಂತೆ ಕೈಗಾರಿಕೆ, ಸೇವೆ, ವ್ಯಾಪಾರ ಪ್ರಾರಂಭಿಸುವ ಪರ ಇದ್ದೇನೆ. ಹಣಕಾಸಿನ ಇತಿಮಿತಿ ಆಧಾರದಲ್ಲಿ ನಷ್ಟ ತುಂಬಲು ರಾಜ್ಯ ಸರ್ಕಾರ ಒಂದು ಪ್ಯಾಕೇಜ್ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ತಜ್ಞರ ಸಮಿತಿ ಚರ್ಚಿಸುತ್ತಿದ್ದು, ವರದಿ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ಭಾಗವಹಿಸಿದ್ದವು. ಎಫ್.ಕೆ.ಸಿ.ಸಿ.ಐ. ಪರವಾಗಿ ಅಧ್ಯಕ್ಷರಾದ ಶ್ರೀ ಸಿ.ಆರ್. ಜನಾರ್ಧನ್, ಹಿರಿಯ ಉಪಾಧ್ಯಕ್ಷರಾದ ಪೆರಿಕಲ್ ಎಂ. ಸುಂದರ್, ಮಾಜಿ ಅಧ್ಯಕ್ಷರಾದ ತಲ್ಲಂ ವೆಂಕಟೇಶ್ ಭಾಗವಹಿಸಿದ್ದರು.
ಎಫ್ಕೆಸಿಸಿ ಅಧ್ಯಕ್ಷರಾದ ಸಿ.ಆರ್. ಜನಾರ್ಧನ್, ಉಪಾಧ್ಯಕ್ಷರಾದ ಪೇರಿಕಲ್ ಎಮ್ ಸುಂದರ್, ಮಾಜಿ ಅಧ್ಯಕ್ಷರಾದ ತಲ್ಲಂ ವೆಂಕಟೇಶ್, ವಿ.ಜಿ. ಕಿರಣ್ ಕುಮಾರ್ ಹಾಗೂ ಸಂಸ್ಥೆಯ ಸದಸ್ಯರು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ₹ 73 ಲಕ್ಷ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.