ADVERTISEMENT

ಬೆಂಗಳೂರು: ಹೊಯ್ಸಳ ಶೈಲಿಯಲ್ಲಿ ತಲೆ ಎತ್ತಲಿದೆ ‘ಧಾರ್ಮಿಕ ಸೌಧ’

ಕೆ.ಆರ್‌. ಸರ್ಕಲ್‌ ಬಳಿ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ನಾಲ್ಕು ಅಂತಸ್ತಿನ ಕಟ್ಟಡ

ಬಾಲಕೃಷ್ಣ ಪಿ.ಎಚ್‌
Published 23 ಜೂನ್ 2025, 23:58 IST
Last Updated 23 ಜೂನ್ 2025, 23:58 IST
ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ‘ಧಾರ್ಮಿಕ ಸೌಧ’ದ ಮಾದರಿ
ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ‘ಧಾರ್ಮಿಕ ಸೌಧ’ದ ಮಾದರಿ   

ಬೆಂಗಳೂರು: ನಗರದ ಹೃದಯ ಭಾಗದಲ್ಲಿ ಹೊಯ್ಸಳ ಶೈಲಿಯಲ್ಲಿ ನಾಲ್ಕು ಅಂತಸ್ತಿನ ಭವ್ಯ ಕಟ್ಟಡವನ್ನು ಮುಜರಾಯಿ ಇಲಾಖೆ ನಿರ್ಮಿಸಲಿದೆ. ಆಧುನಿಕ ಮತ್ತು ಪಾರಂಪರಿಕ ಲಕ್ಷಣವಿರುವ ಈ ‘ಧಾರ್ಮಿಕ ಸೌಧ’ ನಗರದ ಆಕರ್ಷಣೆಯ ಕೇಂದ್ರವಾಗಲಿದೆ.

ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ (ಮುಜರಾಯಿ) ಕಚೇರಿಗಳು ಸದ್ಯ ಮಿಂಟೊ ಆಸ್ಪತ್ರೆ ಎದುರುಗಡೆಯ ಬಾಡಿಗೆ ಕಟ್ಟಡದಲ್ಲಿವೆ. ಪ್ರತಿ ತಿಂಗಳು ₹11 ಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ. ಧಾರ್ಮಿಕ ಸೌಧ ನಿರ್ಮಾಣಗೊಂಡ ಬಳಿಕ ಮುಜರಾಯಿ ಇಲಾಖೆಯ ಎಲ್ಲ ಕಚೇರಿಗಳು ಸೌಧಕ್ಕೆ ಸ್ಥಳಾಂತರಗೊಳ್ಳಲಿವೆ.

ವಿಧಾನಸೌಧ–ಕೆ.ಆರ್‌. ಸರ್ಕಲ್‌ ಮಧ್ಯೆ ಇರುವ ಬಹುಮಹಡಿ ಕಟ್ಟಡದ ಎದುರುಗಡೆ ಮುಜರಾಯಿ ಇಲಾಖೆಗೆ ಸೇರಿದ ರಾಮಾಂಜನೇಯ ದೇವಸ್ಥಾನವಿದೆ. ಇಲ್ಲಿ ಒಟ್ಟು 26 ಗುಂಟೆ ಜಮೀನು ಇದ್ದು, 6 ಗುಂಟೆಯಲ್ಲಿ ದೇವಸ್ಥಾನವಿದೆ. ಉಳಿದ 20 ಗುಂಟೆ ಜಮೀನಿನಲ್ಲಿ ₹10 ಕೋಟಿ ವೆಚ್ಚದಲ್ಲಿ ‘ಧಾರ್ಮಿಕ ಸೌಧ’ ನಿರ್ಮಿಸಲು ರಾಜ್ಯ ಧಾರ್ಮಿಕ ಪರಿಷತ್ತು ನಿರ್ಧರಿಸಿದೆ. 

ADVERTISEMENT

ಹೊಯ್ಸಳ ಶೈಲಿಯಲ್ಲಿ ನಾಲ್ಕು ಅಂತಸ್ತಿನ ಸೌಧ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ನೆಲಮಹಡಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ. ಮೊದಲನೆಯ ಮಹಡಿಯಲ್ಲಿ ನ್ಯಾಯಾಲಯ ಸಭಾಂಗಣ, ಆಯುಕ್ತರ ಕಚೇರಿ, ಸರ್ವೆ ವಿಭಾಗ, ಇಲಾಖೆಯ ಕೇಂದ್ರ ಸ್ಥಾನ ಸಹಾಯಕರ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ಆಗಮ ಅಧಿಕಾರಿ ವಿಭಾಗ, ಐಟಿ ವಿಭಾಗ, ಎಂಜಿನಿಯರಿಂಗ್ ವಿಭಾಗ, ಮೀಟಿಂಗ್‌ ಹಾಲ್‌, ಕೇಂದ್ರ ಸ್ಥಾನ ಸಹಾಯಕ–1ರ ಕಚೇರಿಗಳು ನಿರ್ಮಾಣಗೊಳ್ಳಲಿವೆ. ಮೂರನೇ ಮಹಡಿಯಲ್ಲಿ ತೆರೆದ ಕಚೇರಿ ಸಭಾಂಗಣ, ಅಧೀಕ್ಷಕರ ಕಚೇರಿಗಳು, ಡಿಜಿಟಲ್‌ ಗ್ರಂಥಾಲಯ, ದಾಖಲೆಗಳ ಕೊಠಡಿ ನಿರ್ಮಿಸಲಾಗುತ್ತದೆ. ನಾಲ್ಕನೇ ಮಹಡಿಯಲ್ಲಿ ಆಡಿಟೋರಿಯಂ ಇರಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಾಂಜನೇಯ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ಎರಡು ಬೆಡ್‌ ರೂಂನ ಮನೆಗಳನ್ನು ಕೂಡ ಪಕ್ಕದಲ್ಲಿಯೇ ನಿರ್ಮಿಸಲಾಗುವುದು. ದೇವಸ್ಥಾನದ ಮುಂದೆ ಇರುವ ಯಾಗಶಾಲೆ, ಪಾಕಶಾಲೆಗಳನ್ನು ನವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮುಜರಾಯಿ ಸಂಸ್ಥೆಗಳು: ಸ್ವಾತಂತ್ರ್ಯ ಬಂದ ಬಳಿಕ ವಿವಿಧ ಕಾಯ್ದೆಯಡಿ ಮುಜರಾಯಿ ಸಂಸ್ಥೆಗಳು ಮತ್ತು ದೇವಸ್ಥಾನಗಳು ಕಾರ್ಯನಿರ್ವಹಿಸುತ್ತಾ ಬಂದಿದ್ದು, 1997ರಲ್ಲಿ ಏಕರೂಪ ಮತ್ತು ಸಮರ್ಪಕ ನಿರ್ವಹಣೆಗಾಗಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಕಾಯ್ದೆ ರೂಪಿಸಲಾಯಿತು. ರಾಜ್ಯದಲ್ಲಿರುವ ‘ಎ’, ‘ಬಿ’, ‘ಸಿ’ ವರ್ಗದ ಒಟ್ಟು 34,564 ದೇವಸ್ಥಾನಗಳಲ್ಲದೇ  ಮೈಸೂರು ಮಹಾರಾಜ ಸಂಸ್ಕೃತ ಕಾಲೇಜು, ಆಗಮ ವಿಭಾಗ ಮತ್ತು ಮೇಲುಕೋಟೆ ಸರ್ಕಾರಿ ಸಂಸ್ಕ್ರತ ಕಾಲೇಜು ಹಾಗೂ ಆಂಧ್ರಪ್ರದೇಶದ ತಿರುಮಲ, ಮಂತ್ರಾಲಯ, ಶ್ರೀಶೈಲ, ಮಹಾರಾಷ್ಟ್ರದ ತುಳಜಾಪುರ ಮತ್ತು ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕರ್ನಾಟಕ ರಾಜ್ಯದ ಛತ್ರಗಳು ಮುಜರಾಯಿ ಇಲಾಖೆ ಅಡಿಯಲ್ಲಿ ಬರುತ್ತವೆ.

ನಾಳೆ ಸಚಿವ ಸಂಪುಟದಲ್ಲಿ ಚರ್ಚೆ

‘ಧಾರ್ಮಿಕ ಸೌಧ’ದ ನೀಲನಕ್ಷೆ ಸಿದ್ಧವಾಗಿದ್ದು ಬುಧವಾರ (ಜೂನ್ 25) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯುವುದು ವಾಡಿಕೆ. ಈ ವಾರ ಒಂದು ದಿನ ಮೊದಲೇ ಸಭೆ ನಡೆಯಲಿದೆ. ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಒಕ್ಕೂಟದ ಒತ್ತಾಯ ಕಾರಣ

ಮುಜರಾಯಿ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ಅಲ್ಲದೆ ಅಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲ. ಹೀಗಾಗಿ ಧಾರ್ಮಿಕ ಸೌಧ ನಿರ್ಮಿಸಿ ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರ ಪರಿಣಾಮ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ ತಿಳಿಸಿದರು.

‘ಧಾರ್ಮಿಕ ಇಲಾಖೆಗೂ ಕಂದಾಯ ಇಲಾಖೆಗೂ ನಿಕಟ ಸಂಬಂಧ ಇದೆ. ಕಂದಾಯ ಇಲಾಖೆ ಬಹುಮಹಡಿ ಕಟ್ಟಡದಲ್ಲಿರುವುದರಿಂದ ಸಂಪರ್ಕ ಸುಲಭವಾಗಲಿದೆ. ಮುಜರಾಯಿ ಇಲಾಖೆಗೆ ವಿವಿಧ ಕೆಲಸಗಳ ನಿಮಿತ್ತ ಬರುವ ಅರ್ಚಕರಿಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ವಿಶ್ರಾಂತಿ ಗೃಹವನ್ನು ಕೂಡ ‘ಧಾರ್ಮಿಕ ಸೌಧ’ದಲ್ಲಿ ನಿರ್ಮಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದೇ ಜಾಗ ನಮ್ಮದೇ ಹಣ’

‘ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿಯೇ ಸೌಧ ನಿರ್ಮಾಣಗೊಳ್ಳಲಿದೆ. ಇದಕ್ಕೆ ಬೇರೆ ಅನುದಾನ ಬಳಸುತ್ತಿಲ್ಲ. ನಮ್ಮದೇ ಇಲಾಖೆಯಲ್ಲಿರುವ ಸಾಮಾನ್ಯ ಸಂಗ್ರಹ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ನೂರಾರು ಎಕರೆ ಜಮೀನು ರಾಜ್ಯದಲ್ಲಿದೆ. ಬೆಂಗಳೂರಿನಲ್ಲಿಯೂ ಇದೆ. ಆದರೂ ಸ್ವಂತ ಕಟ್ಟಡ ಇರಲಿಲ್ಲ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಅಂಕಿ ಅಂಶಗಳು 205 ₹25 ಲಕ್ಷಕ್ಕಿಂತ ಅಧಿಕ ವರಮಾನ ಇರುವ ‘ಎ’ ವರ್ಗದ ದೇವಸ್ಥಾನಗಳು 193 ₹5 ಲಕ್ಷದಿಂದ ₹25 ಲಕ್ಷ ವರಮಾನ ಇರುವ ‘ಬಿ’ ವರ್ಗದ  ದೇವಸ್ಥಾನಗಳು 34166 ₹5 ಲಕ್ಷಕ್ಕಿಂತ ಕಡಿಮೆ ವರಮಾನ ಇರುವ ‘ಸಿ’ ವರ್ಗದ  ದೇವಸ್ಥಾನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.