ADVERTISEMENT

ಬದಲಾವಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ: ಚೆ ಗೆವಾರ ಪುತ್ರಿ ಆಲಿಡಾ ಗೆವಾರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 16:35 IST
Last Updated 19 ಜನವರಿ 2023, 16:35 IST
ನಾಗರಿಕ ಸನ್ಮಾನ, ಕ್ಯೂಬಾ ಸೌಹಾರ್ದತೆಯ ಸಮಾರಂಭ ಕಾರ್ಯಕ್ರಮದಲ್ಲಿ ಜನಪ್ರಿಯ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ಚೇ ಗುವಾರ ಅವರ ಮಗಳಾದ ಅಲಿಡಾ ಗೆವಾರ (ಎಡ ಬದಿ) ಮತ್ತು ಮೊಮ್ಮಗಳು ಎಸ್ತಿಫಾನಿಯಾ ಕಾಣಬಹುದು ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ನಾಗರಿಕ ಸನ್ಮಾನ, ಕ್ಯೂಬಾ ಸೌಹಾರ್ದತೆಯ ಸಮಾರಂಭ ಕಾರ್ಯಕ್ರಮದಲ್ಲಿ ಜನಪ್ರಿಯ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ಚೇ ಗುವಾರ ಅವರ ಮಗಳಾದ ಅಲಿಡಾ ಗೆವಾರ (ಎಡ ಬದಿ) ಮತ್ತು ಮೊಮ್ಮಗಳು ಎಸ್ತಿಫಾನಿಯಾ ಕಾಣಬಹುದು ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ‘ಸಮಾಜವನ್ನು ಬದಲಿಸಲು ದುಡಿಯುವ ವರ್ಗ ತನ್ನೆಲ್ಲ ಶಕ್ತಿ ವ್ಯಯಿಸಬೇಕು. ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ರೂಪಿಸುವುದು ಇಂದಿನ ಅಗತ್ಯ’ ಎಂದು ಕ್ಯೂಬಾ ಕ್ರಾಂತಿಯ ನಾಯಕ ಚೆ ಗೆವಾರ ಅವರ ಮಗಳು ಆಲಿಡಾ ಗೆವಾರ ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ನ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಗುರುವಾರ ಅವರು ಮಾತನಾಡಿದರು.

‘ಸಾಮಾನ್ಯ ಜನರಿಗೆ ನಮ್ಮ ಮೌಲ್ಯಗಳನ್ನು ತಲುಪಿಸುವುದು ಅಗತ್ಯ. ಬಣ್ಣ, ಜಾತಿ ಅಥವಾ ಸೈದ್ಧಾಂತಿಕ ಭಿನ್ನತೆಗಳು ಇವೆಯಾದರೂ ಅವುಗಳ ನಡುವೆಯೂ ಕಾರ್ಮಿಕ ವರ್ಗ ಏಕತೆ ಪ್ರದರ್ಶಿಸಬೇಕು’ ಎಂದರು.

ADVERTISEMENT

‘ಕ್ಯೂಬಾದಂತಹ ಚಿಕ್ಕ ರಾಷ್ಟ್ರ ಜನರನ್ನು ಒಗ್ಗೂಡಿಸಿ ಅಮೆರಿಕದಂತಹ ದೊಡ್ಡ ಶಕ್ತಿಗೆ ಎದುರಾಗಿ ಸಮಾಜವಾದದ ಕ್ರಾಂತಿಯ ಸ್ವರೂಪ ತೋರಿಸಿಕೊಟ್ಟಿದೆ. ಅಮೆರಿಕ, ಕ್ಯೂಬಾ ದೇಶದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಜನರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಸಂಕಷ್ಟಗಳಿಂದಾಗಿ ಜನರು ದೇಶ ತೊರೆಯುವ ಪರಿಸ್ಥಿತಿ ಎದುರಾಯಿತು’ ಎಂದರು.

‘ಸಂಕಷ್ಟಗಳನ್ನು ಎದುರಿಸುವ ನಿಟ್ಟಿನಲ್ಲಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ವೇದಿಕೆಯಲ್ಲಿ ನಿಂತು ನಾನು ನಿಮ್ಮೆಲರ ಸೌಹಾರ್ದ ಬಯಸುತ್ತೇನೆ’ ಎಂದರು.

‘ಫಿಡಲ್‌ ಕ್ಯಾಸ್ಟ್ರೋ ಅವರು ಹೇಳಿದಂತೆ ಒಗ್ಗಟ್ಟಿನ ಎದುರು ಅನ್ಯಾಯ ನಡುಗಿ ಹೋಗುತ್ತದೆ. ಚೆ ಗೆವಾರ ಅವರು ಗೆಲ್ಲುವವರೆಗೂ ಹೋರಾಡುತ್ತಲೇ ಇರೋಣ ಎಂದು ಹೇಳಿದ ಮಾತನ್ನು ನೆನಪಿಸಿಕೊಳ್ಳುತ್ತಿರೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.