ADVERTISEMENT

ಬೆಂಗಳೂರಿನ ಕರಾಳ ಭವಿಷ್ಯಕ್ಕೆ ಮುನ್ನುಡಿ: ಬಿಬಿಎಂಪಿ ಕಾಯ್ದೆಗೆ ಎಎಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 19:57 IST
Last Updated 22 ಡಿಸೆಂಬರ್ 2020, 19:57 IST
   

ಬೆಂಗಳೂರು: ‘ಬಿಬಿಎಂಪಿ ಕಾಯ್ದೆಅವೈಜ್ಞಾನಿಕವಾಗಿದ್ದು, ಇದಕ್ಕೆ ಸಹಿ ಹಾಕುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಬೆಂಗಳೂರಿನ ಕರಾಳ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಕಳವಳಮಂಗಳವಾರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಕಾಯ್ದೆ ಜಾರಿ ಮಾಡಬಾರದು ಎಂದು ಪಕ್ಷ ಈ ಹಿಂದೆಯೇ ಮನವಿ ಮಾಡಿತ್ತು. ಬೆಂಗಳೂರಿನ ಅಧಿಕಾರ ತನ್ನ ಕೈಯಲ್ಲೇ ಇರಬೇಕು ಎನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅತಿಯಾಸೆ ಹಾಗೂ ಹುನ್ನಾರ ಬಯಲಾಗಿದೆ’ ಎಂದು ದೂರಿದರು.

‘ನಗರದ ಅಭಿವೃದ್ಧಿಗೆ ಈ ಕಾಯ್ದೆ ಪೂರಕವಾಗಿದೆ ಎಂದು ಸಾರುತ್ತಿರುವ ಸರ್ಕಾರಕ್ಕೆ ಬೆಂಗಳೂರು ನಗರವೇ ಏಕೆ ಬೇಕು? ಒಳ್ಳೆಯ ಕಾಯ್ದೆಯಾಗಿದ್ದರೆ ಇತರೆ ಮಹಾನಗರ ಪಾಲಿಕೆಗಳಿಗೂ ಅನ್ವಯವಾಗುವಂತೆ ಮಾಡಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ,‘ಸ್ಥಳೀಯ ಸಂಸ್ಥೆಗಳಿಗೆ ಇದ್ದ ಅಧಿಕಾರವನ್ನು ಸರ್ಕಾರ ಕಸಿದುಕೊಂಡಿದೆ. ಅಧಿಕಾರ ವಿಕೇಂದ್ರಿಕರಣ ತತ್ವವನ್ನು ಗಾಳಿಗೆ ತೂರಿ ಸಂಪೂರ್ಣ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಾಲಿಕೆ ಸದಸ್ಯರನ್ನು ಕೇವಲ ಆಟದ ಗೊಂಬೆಗಳನ್ನಾಗಿ ಮಾಡುವ ಕಾಯ್ದೆ ಇದಾಗಿದೆ’ ಎಂದು ಆರೋಪಿಸಿದರು.

‘ಬಿಬಿಎಂಪಿಯ ಅಧಿಕಾರಗಳನ್ನು ಕಸಿದುಕೊಂಡಿರುವ ಸರ್ಕಾರ ಅದನ್ನು ಹಲ್ಲಿಲ್ಲದ ಹಾವಿನಂತೆ ಮಾಡಿತ್ತು. ಈಗ ನೂತನ ಕಾಯ್ದೆಯ ಮೂಲಕ ಬಿಬಿಎಂಪಿಯನ್ನು ಸಂಪೂರ್ಣವಾಗಿ ಸಾಯಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.