ADVERTISEMENT

ಶೇಕಡ 50 ಸುಂಕ: ಪರ್ಯಾಯ ಮಾರ್ಗಕ್ಕೆ ದಾರಿ - ಎ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 17:23 IST
Last Updated 13 ಸೆಪ್ಟೆಂಬರ್ 2025, 17:23 IST
ನಗರದಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಬಾಲು ಕೆಂಚಪ್ಪ, ಎ.ಬಿ. ಪಾಟೀಲ, ಸಿ.ಎನ್. ಶಿವಪ್ರಕಾಶ್ ಮತ್ತು ಎಚ್.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ
ನಗರದಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಬಾಲು ಕೆಂಚಪ್ಪ, ಎ.ಬಿ. ಪಾಟೀಲ, ಸಿ.ಎನ್. ಶಿವಪ್ರಕಾಶ್ ಮತ್ತು ಎಚ್.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಶೇಕಡ 50ರಷ್ಟು ಸುಂಕ ವಿಧಿಸಿರುವುದರಿಂದ ಸಾಕಷ್ಟು ಸವಾಲುಗಳು, ಪರಿಣಾಮಗಳನ್ನು ಎದುರಿಸುವುದರ ಜತೆಗೆ ಪರ್ಯಾಯ ಮಾರ್ಗಕ್ಕೂ ದಾರಿ ಮಾಡಿಕೊಟ್ಟಿದೆ ಎಂದು ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ಅಧ್ಯಕ್ಷ ಎ.ಬಿ.ಪಾಟೀಲ ಹೇಳಿದರು.

ರಾಜ್ಯ ಕೃಷಿ ವ್ಯವಹಾರ ಅಭಿವೃದ್ಧಿ ನಿಗಮ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮುಕ್ತ ವ್ಯಾಪಾರ ಒಪ್ಪಂದ, ದೇಶದ ಕೃಷಿ ವಹಿವಾಟಿನ ಹಿತಾಸಕ್ತಿ ರಕ್ಷಣೆ’ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚೀನಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗುತ್ತದೆ ಎಂದು ಭಾವಿಸಿರಲಿಲ್ಲ. ಯುದ್ಧದ ಕಾರ್ಮೋಡ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಭಾರತದೊಂದಿಗೆ ಹಲವು ದೇಶಗಳು ವ್ಯಾಪಾರ ಒಪ್ಪಂದಕ್ಕೆೆ ಉತ್ಸುಕವಾಗಿವೆ. ಆದರೆ, ಅಮೆರಿಕ ಶೇಕಡ 50 ರಷ್ಟು ಸುಂಕವಿಧಿಸುವ ಮೂಲಕ ದೇಶದ ಕೃಷಿ ರಫ್ತುಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ ಎಂದು ಹೇಳಿದರು.‌

ADVERTISEMENT

ದೇಶದಲ್ಲಿ ಶೇಕಡ 79 ರಷ್ಟು ಸಣ್ಣ ಪ್ರಮಾಣದ ರೈತರಿದ್ದಾರೆ. ರೈತ ಉತ್ಪಾದಕ ಸಂಸ್ಥೆಗಳು ನೋಂದಾಯಿತ ರೈತರಿಗೆ ಬೆಳೆದ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶವನ್ನು ಕಲ್ಪಿಸುತ್ತಿವೆ. ದೇಶದಿಂದ ಶೇಕಡ 87 ಬಿಲಿಯನ್‌ನಷ್ಟು ಉತ್ಪನ್ನಗಳು ಅಮೆರಿಕಕ್ಕೆ ರಫ್ತು ಆಗುತ್ತಿದ್ದು, ಶೇಕಡ 37 ರಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಫ್ತು ನೀತಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಿ ರೈತರನ್ನು ಉತ್ತೇಜಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಭಾರತದಲ್ಲಿ 2024-25ನೇ ವರ್ಷದಲ್ಲಿ 355 ಮಿಲಿಯನ್ ಟನ್ ಆಹಾರ ಧಾನ್ಯಗಳು ಮತ್ತು 367 ಮಿಲಿಯನ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಿದ್ದು, 2019-2020ರವರೆಗೆ ಆಹಾರ ಆಮದು ಮಾಡಿಕೊಳ್ಳುತ್ತಿದ್ದ ಭಾರತ 2020-21 ರಿಂದ ಆಹಾರ ರಫ್ತು ಮಾಡುವ ದೇಶವಾಗಿದೆ ಎಂದರು.

ಆರ್‌ಬಿಐನ ಮಾಜಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಾಲುಕೆಂಚಪ್ಪ, ಕೆಪೆಕ್ ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಶಿವಕುಮಾರ್, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಸ್.ಬಿ. ಯೋಗಾನಂದ, ಕಾರ್ಯದರ್ಶಿ ಜಿ.ಎಚ್.ಯೋಗೇಶ್ ಪಾಲ್ಗೊಂಡಿದ್ದರು.

ಕೃಷಿ ತಂತ್ರಜ್ಞರ ಸಂಸ್ಥೆ ಸೇರಿ ವಿಷಯ ತಜ್ಞರೊಳಗೊಂಡ ಕಾರ್ಯಾಗಾರದಲ್ಲಿ ಕೈಗೊಂಡಿರುವ ನಿರ್ಣಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಡಾ.ಎ.ಬಿ.ಪಾಟೀಲ, ಐಎಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.