ಬೆಂಗಳೂರು: ಜಮೀನು ಮಾಲೀಕರಿಗೆ ರಕ್ಷಣೆ ನೀಡಲು ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನಲ್ಲಿ ಕಾನ್ಸ್ಟೆಬಲ್ ಮೂಲಕ ₹ 6 ಲಕ್ಷ ಪಡೆದ ಆರೋಪ ಎದುರಿಸುತ್ತಿರುವ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯಶವಂತ ಅವರು ನಾಲ್ಕನೇ ದಿನವೂ ಪತ್ತೆಯಾಗಿಲ್ಲ.
ಗುರುವಾರ ರಾತ್ರಿ ಠಾಣೆಯಲ್ಲೇ ಇನ್ಸ್ಪೆಕ್ಟರ್ ಪರವಾಗಿ ₹ 6 ಲಕ್ಷ ಲಂಚ ಪಡೆದ ಹೆಡ್ ಕಾನ್ಸ್ಟೆಬಲ್ ರಾಜು ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಆಗಿನಿಂದಲೇ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ತಲೆಮರೆಸಿಕೊಂಡಿರುವ ಯಶವಂತ ನಾಲ್ಕು ದಿನ ಕಳೆದರೂ ಪತ್ತೆಯಾಗಿಲ್ಲ. ಆರೋಪಿ ಪತ್ತೆಗೆ ಬೆಂಗಳೂರು ನಗರ ಮತ್ತು ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
‘ಇನ್ಸ್ಪೆಕ್ಟರ್ ಯಶವಂತ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಆರೋಪಿಯ ಕುರಿತು ವಿವಿಧೆಡೆ ಮಾಹಿತಿ ಸಂಗ್ರಹಿಸುವ ಕೆಲಸವೂ ಮುಂದುವರಿದಿದೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.