ADVERTISEMENT

ಅಪಘಾತ: ಇಬ್ಬರು ಎಂಜಿನಿಯರ್‌ಗಳ ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 20:46 IST
Last Updated 27 ಫೆಬ್ರುವರಿ 2022, 20:46 IST

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶನಿವಾರ ತಡರಾತ್ರಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಎಂಜಿನಿಯರಿಂಗ್ ಪದವೀಧರರಿಬ್ಬರು ಮೃತಪಟ್ಟಿದ್ದಾರೆ.

‘ಸ್ಥಳೀಯ ನಿವಾಸಿ ಯತೀಶ್ (22), ಕಿರಣ್ (22) ಮೃತರು. ಇಬ್ಬರು ಸಂಬಂಧಿಕರು. ಅಪಘಾತದ ಬಗ್ಗೆ ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗಷ್ಟೇ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಕಿರಣ್ ಹಾಗೂ ಯತೀಶ್, ಒಟ್ಟಿಗೆ ಇರುತ್ತಿದ್ದರು. ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬ್ಯಾಟರಾಯನಪುರ ಜಂಕ್ಷನ್‌ಗೆ ಬೈಕ್‌ನಲ್ಲಿ ಬಂದಿದ್ದರು. ಅದೇ ವೇಳೆ ಅತೀ ವೇಗವಾಗಿ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿತ್ತು.’

ADVERTISEMENT

‘ಅಪಘಾತದಿಂದಾಗಿ ಕಿರಣ್ ಹಾಗೂ ಯತೀಶ್, ಮೇಲಕ್ಕೆ ಹಾರಿ ರಸ್ತೆಗೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಹೇಳಿದರು.

ಕಾರಣ ಗೊತ್ತಾಗಿಲ್ಲ: ‘ಇಬ್ಬರೂ ತಡರಾತ್ರಿ ಮನೆಯಿಂದ ಹೊರಗೆ ಬಂದಿದ್ದಕ್ಕೆ ಕಾರಣ ಗೊತ್ತಾಗಿಲ್ಲ. ಸಂಬಂಧಿ ಕಿರಣ್ ಅವರನ್ನು ಮನೆಗೆ ಬಿಟ್ಟು ಬರಲು ಯತೀಶ್ ಹೊರಟಿದ್ದರೆಂದು ಕೆಲವರು ಹೇಳುತ್ತಿದ್ದಾರೆ. ಆ ಬಗ್ಗೆ ಖಚಿತತೆ ಇಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.