ಬೆಂಗಳೂರು ಶ್ರೀರಾಮಪುರದ ಪ್ರಜ್ವಲ್(22) ಹಾಗೂ ಸಹನಾ(21)
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ–75ರ ನೆಲಮಂಗಲ– ಕುಣಿಗಲ್ ಬೈಪಾಸ್ನಲ್ಲಿ ಲಾರಿ ಹಾಗೂ ಬೈಕ್ ನಡುವೆ ಭಾನುವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ನೃತ್ಯ ಕಲಾವಿದರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು ಶ್ರೀರಾಮಪುರದ ಪ್ರಜ್ವಲ್(22) ಹಾಗೂ ಸಹನಾ(21) ಮೃತಪಟ್ಟ ಕಲಾವಿದರು. ಇಬ್ಬರೂ ಸ್ನೇಹಿತರಾಗಿದ್ದು, ನೃತ್ಯ ಕಲಾವಿದರಾಗಿದ್ದರು. ಕಿರುತೆರೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಿದ್ದರು.
ಕುಣಿಗಲ್ನಲ್ಲಿ ಭಾನುವಾರ ಮದುವೆ ಇತ್ತು. ಮದುವೆ ಮುಗಿಸಿಕೊಂಡು ಇಬ್ಬರೂ ಬೈಕ್ನಲ್ಲಿ ವಾಪಸ್ ಬರುತ್ತಿದ್ದರು. ಪಟ್ಟಣದ ಕುಣಿಗಲ್ ವೃತ್ತವನ್ನು ದಾಟುವಾಗ ಬೆಂಗಳೂರು ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದು, ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಲಾರಿ ಜಪ್ತಿ ಮಾಡಿಕೊಂಡು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವೈಜ್ಞಾನಿಕ ಜಂಕ್ಷನ್: ನೆಲಮಂಗಲ ಜಂಕ್ಷನ್ ಅವೈಜ್ಞಾನಿಕವಾಗಿದ್ದು, ರಾತ್ರಿ ವೇಳೆ ನಾಲ್ಕೂ ದಿಕ್ಕಿನಿಂದ ವಾಹನಗಳು ವೇಗವಾಗಿ ಬರುತ್ತಿರುತ್ತವೆ. ಇದರಿಂದ ಪದೇ ಪದೇ ಅಪಘಾತಗಳು ಸಂಭವಿಸಿ ಸಾವು– ನೋವು ಆಗುತ್ತಿದೆ ಎಂದು ಸ್ಥಳೀಯರು ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.