ADVERTISEMENT

ಅಪಘಾತ: ತರಬೇತಿಗೆ ಬಂದಿದ್ದ ಟೆಕಿ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:09 IST
Last Updated 8 ಫೆಬ್ರುವರಿ 2019, 19:09 IST

ಬೆಂಗಳೂರು: ಯಶವಂತಪುರ ಸಮೀಪದ ಎಂಇಐ ಜಂಕ್ಷನ್ ಬಳಿ ಗುರುವಾರ ರಾತ್ರಿ ಟಾಟಾ ಸುಮೊ ಗುದ್ದಿದ್ದರಿಂದಾಗಿ ಪಾದಚಾರಿ ಮಂತ್ರಿಸಿಂಗ್ (29) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹರಿಯಾಣ ನಿವಾಸಿಯಾಗಿದ್ದ ಮಂತ್ರಿಸಿಂಗ್, ಅಲ್ಲಿಯ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ವೃತ್ತಿ ತರಬೇತಿಗೆಂದು ಕೆಲವು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

‘ಎಂಇಐ ಜಂಕ್ಷನ್ ಬಳಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದ ಮಂತ್ರಿಸಿಂಗ್, ಅಲ್ಲಿಂದಲೇ ನಿತ್ಯ ತರಬೇತಿಗೆ ಹೋಗಿ ಬರುತ್ತಿದ್ದರು. ಗುರುವಾರ ರಾತ್ರಿಯೂ ಮಲ್ಲೇಶ್ವರದಿಂದ ಓಲಾ ಆಟೊದಲ್ಲಿ ಹೋಟೆಲ್ ಸಮೀಪ ಬಂದಿಳಿದಿದ್ದರು. ಚಾಲಕನಿಗೆ ಹಣ ಕೊಟ್ಟು ಹೋಟೆಲ್‌ನತ್ತ ನಡೆದುಕೊಂಡು ಹೊರಟಿದ್ದಾಗ, ತುಮಕೂರಿನಿಂದ ನಗರದತ್ತ ಬರುತ್ತಿದ್ದ ಟಾಟಾ ಸುಮೊ ಅವರಿಗೆ ಗುದ್ದಿತ್ತು.’

ADVERTISEMENT

‘ತಲೆಗೆ ಪೆಟ್ಟು ಬಿದ್ದಿದ್ದರಿಂದಾಗಿ ತೀವ್ರ ರಕ್ತಸ್ರಾವವಾಗಿ ಮಂತ್ರಿಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಾಟಾ ಸುಮೊ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಆ ಚಾಲಕ ತಲೆಮರೆಸಿಕೊಂಡಿದ್ದಾನೆ’ ಎಂದು ಹೇಳಿದರು.

‘ಮಂತ್ರಿಸಿಂಗ್‌ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಚಾಲಕನ ಪತ್ತೆಗಾಗಿ ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.